ಹೊಸದಿಗಂತ ಡಿಜಿಟಲ್ ಡೆಸ್ಕ್
ಆಂಧ್ರಪ್ರದೇಶದ ಎಲೂರು ಜಿಲ್ಲೆಯಲ್ಲಿ ಶನಿವಾರ 18 ಬೀದಿ ನಾಯಿಗಳಿಗೆ ವಿಷ ನೀಡಿ ಕೊಂದು ಹಾಕಿದ ಅಮಾನವೀಯ ಘಟನೆ ನಡೆದಿದೆ. ಚೇಬ್ರೋಳೆ ಗ್ರಾಮದ ಮುಖಂಡರ ಆದೇಶದ ಮೇರೆಗೆ ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿ ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಂಧ್ರಪ್ರದೇಶ ಪೊಲೀಸರು ಚೇಬ್ರೋಲೆ ಗ್ರಾಮದ ಸರಪಂಚ್ ಹಾಗೂ ಕಾರ್ಯದರ್ಶಿ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಾಯಿಗಳ ಸಾವಿನ ನಂತರ ಗ್ರಾಮದ ಮುಖ್ಯಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಪ್ರಾಣಿ ಹಕ್ಕುಗಳ ಗುಂಪುಗಳು ಒತ್ತಾಯಿಸಿವೆ. ಚೇಬ್ರೋಲೆ ಗ್ರಾಮದ ವಿವಿಧೆಡೆ ಬೀದಿ ನಾಯಿಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ಪ್ರಾಣಿ ಪ್ರಿಯರು ಗ್ರಾಮಕ್ಕೆ ದೌಡಾಯಿಸಿ ವಿಚಾರಿಸಿದಾಗ ಗ್ರಾ.ಪಂ.ಕಾರ್ಯದರ್ಶಿ ಹಾಗೂ ಇತರರ ಒತ್ತಾಯದ ಮೇರೆಗೆ ನಾಯಿಗಳಿಗೆ ವಿಷದ ಚುಚ್ಚುಮದ್ದು ನೀಡಿರುವುದು ತಿಳಿದು ಬಂದಿದೆ.
ಈ ವರ್ಷದ ಆರಂಭದಲ್ಲಿ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಬೀದಿನಾಯಿಗಳನ್ನು ಕೊಂದು ಹಾಕಲಾಗಿತ್ತು. ಸತ್ತ ನಾಯಿಗಳು ಗುಂಡಿಗಳಲ್ಲಿ ಬಿದ್ದಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರೀ ಕೋಲಾಹಲಕ್ಕೆ ಕಾರಣವಾಗಿತ್ತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ