ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜಕೀಯ ಹಸ್ತಕ್ಷೇಪದ ಒಂದು ಉದಾಹರಣೆ ತೋರಿಸಲಿ. ಸಿಎಂ ಒಂದೇ ಒಂದು ಉದಾಹರಣೆ ತೋರಿಸಿದರೆ ರಾಜೀನಾಮೆ ನೀಡುತ್ತೇನೆ ಎಂದು ಕೇರಳ ರಾಜ್ಯಪಾಲ ಆರೀಫ್ ಮೊಹಮದ್ ಖಾನ್ ಬಹಿರಂಗ ಸವಾಲು ಹಾಕಿದ್ದಾರೆ.
ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳ ನೇಮಕದಲ್ಲಿ ರಾಜಕೀಯ ಹಸ್ತಕ್ಷೇಪ ನಡೆಸುತ್ತಿದ್ದಾರೆ ಎಂಬ ಸಿಎಂ ಪಿಣರಾಯಿ ವಿಜಯನ್ ಅವರ ಆರೋಪವನ್ನು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ತಿರಸ್ಕರಿಸಿದ್ದಾರೆ.
“ಆರ್ಎಸ್ಎಸ್ ಜನರನ್ನು ಕರೆತರಲು ನಾನು ಹೀಗೆ ಮಾಡುತ್ತಿದ್ದೇನೆ ಎಂದು ಅವರು ಪದೇ ಪದೇ ಹೇಳುತ್ತಿದ್ದಾರೆ. ನನ್ನ ಅಧಿಕಾರವನ್ನು ಬಳಸಿಕೊಂಡು ನಾನು ಆರ್ಎಸ್ಎಸ್ನವರಲ್ಲ, ಯಾವುದೇ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ. ಅದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು (ಸಿಎಂ ವಿಜಯನ್) ರಾಜೀನಾಮೆ ನೀಡಲು ಸಿದ್ಧರಿದ್ದಾರೆಯೇ?” ಎಂದು ರಾಜ್ಯಪಾಲರು ಸವಾಲು ಹಾಕಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.
ಇದಲ್ಲದೆ, ಚಿನ್ನದ ಕಳ್ಳಸಾಗಣೆ ಹಗರಣದ ಬಗ್ಗೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ರಾಜ್ಯಪಾಲರು, “ನಾನು ಕಳ್ಳಸಾಗಣೆ ಚಟುವಟಿಕೆಗಳನ್ನು ಮುಖ್ಯಮಂತ್ರಿಗಳ ಕಚೇರಿಯಿಂದ ಪ್ರೋತ್ಸಾಹಿಸುತ್ತಿರುವುದನ್ನು ನೋಡಿದ್ದೇನೆ. ರಾಜ್ಯ ಸರ್ಕಾರ, ಸಿಎಂಒ ಮತ್ತು ಸಿಎಂ ಆಪ್ತರು ಕಳ್ಳಸಾಗಾಣಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ, ನಾನು ಮಧ್ಯಪ್ರವೇಶಿಸಲು ಕಾರಣಗಳಿವೆ.
ಇನ್ನು ಇತ್ತೀಚಿನ ಕೇರಳ ವಿವಿ ಸಮಸ್ಯೆಯ ಕುರಿತು ಮಾತನಾಡಿದ ಅವರು “ಒಂದು ತಿಂಗಳಿನಿಂದ ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಪ್ರತಿ ಕಡತವನ್ನೂ ಹಿಂತಿರುಗಿಸಿದ್ದೇನೆ… ಎಲ್ಲರಿಗೂ ಲಕ್ಷ್ಮಣ ರೇಖೆ ಇದೆ, ರಾಜ್ಯಪಾಲರ ಕರೆಗೆ ಸ್ಪಂದಿಸದ ಸಿಎಂ ಲಕ್ಷ್ಮಣ ರೇಖೆ ದಾಟುತ್ತಿದ್ದಾರೆ… ಸಿಎಂ ಕಚೇರಿಯಲ್ಲಿ ಜನ ಪರದಾಡುತ್ತಿದ್ದಾರೆ” ಎಂದು ರಾಜ್ಯಪಾಲ ಆರಿಫ್ ಖಾನ್ ಹೇಳಿದ್ದಾರೆ.