ಹೊಸದಿಗಂತ ವರದಿ ಕಲಬುರಗಿ:
ಕರ್ನಾಟಕದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ನಡೆಯುತ್ತಿದ್ದು, ತಪಾಸಣೆಯ ನೆಪದಲ್ಲಿ ವಿವಾಹಿತ ಹೆಣ್ಣುಮಕ್ಕಳ ಸುಮಂಗಲಿಯ ಪ್ರತೀಕವಾದ ತಾಳಿ ತೆಗೆಸುತ್ತಿರುವುದನ್ನು ಗಮನಿಸಿದರೆ ರಾಜ್ಯದ ಸಿದ್ದರಾಮಯ್ಯನವರ ಸರ್ಕಾರ ಹಿಂದುಗಳ ಭಾವನೆಯ ಜೊತೆ ಚೆಲ್ಲಾಟವಾಡುತ್ತಿದೆ ಎನಿಸುತ್ತಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಆರೋಪಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಲೆಕ್ಕ ಸಹಾಯಕರ ಪರೀಕ್ಷೆಯಲ್ಲಿ ಹೆಣ್ಣುಮಕ್ಕಳ ತಾಳಿಗೆ ರಿಯಾಯಿತಿ ಇದೆ. ಆದರೆ ಉದ್ದೇಶ ಪೂರಿತವಾಗಿ ಎಲ್ಲ ಹೆಣ್ಣುಮಕ್ಕಳ ತಾಳಿ ಮತ್ತು ಕಾಲುಂಗುರ ತೆಗೆಸಿರುವುದನ್ನು ನಾವು ಖಂಡಿಸುತ್ತೇವೆ ಎಂದರು.
ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿ ಸರ್ಕಾರ, ಕುಂಕುಮ ಬಳಸಬೇಡಿ, ಅರಶಿಣ ಬಳಸಬೇಡಿ ಹೀಗೆ ಒಟ್ಟಾರೆ ಹಿಂದೂಗಳ ಆಚರಣೆ, ಆಚಾರ ವಿಚಾರಗಳ ವಿರುದ್ಧ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರ್ಕಾರ ನಿಂತಂತೆ ಕಾಣುತ್ತಿದೆ. ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿದೆ ಎನ್ನುವ ಕಾರಣಕ್ಕೆ ತಪಾಸಣೆ ನಡೆಸಲಿ, ತಪಾಸಣೆ ವೇಳೆ ಏನಾದರೂ ಇರುವುದು ಕಂಡುಬಂದಲ್ಲಿ ಅಂತಹ ಅಭ್ಯರ್ಥಿಗಳ ಬಗ್ಗೆ ನಿಗಾ ವಹಿಸಿ ಆದರೆ, ಎಲ್ಲ ಮಹಿಳೆಯರಿಗೆ ತಾಳಿ, ಕಾಲುಂಗುರ ತೆಗೆಸುವುದು ಇದು ಕಾಂಗ್ರೆಸ್ ಸರ್ಕಾರ ಹಿಂದುಗಳಿಗೆ ಮಾಡಿದ ಅಪಮಾನವೆಂದು ಹೇಳಿದ್ದಾರೆ.