ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾವರ್ಕರ್ ಅವರ ಕಾಲ ಬಳಿಯೂ ಕೂಡಲು ಸಿದ್ದರಾಮಯ್ಯಗೆ ಯೋಗ್ಯತೆಯಿಲ್ಲ. ದೇಶ ಭಕ್ತರ ಕುರಿತು ಮಾತನಾಡಲು ಅವರು ಯೋಗ್ಯರಲ್ಲ ಎಂದು ಭಾಜಪ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನ ಸಭಾಂಗಣದಲ್ಲಿ ಪ್ರಜ್ಞಾ ಪ್ರವಾಹ ಹಾಗೂ ಬಯಲು ವೇದಿಕೆ ಆಯೋಜಿಸಿದ್ದ ಜಯೋಸ್ತುತೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾವರ್ಕರ್ ಅವರದ್ದು ತೀಕ್ಷ್ಣ ಆಲೋಚನೆ ಹಾಗೂ ನಿಷ್ಠುರ ಭಾಷಿಕರಾಗಿದ್ದರು. ಲಂಡನನ ಇಂಡಿಯಾ ಹೌಸ್ ನ್ನು ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರವನ್ನಾಗಿ ಪರಿವರ್ತಿಸಿದ್ದರು. ಸಿದ್ದರಾಮಯ್ಯ ಸಾವರ್ಕರ್ ಅವರನ್ನು ಅಪಮಾನ ಮಾಡಿದ ಕಾರಣ ಸಾವರ್ಕರ್ ಕುರಿತು ವ್ಯಾಪಕ ಪ್ರಚಾರ ಹಾಗೂ ಈ ವರ್ಷದ ಗಣೇಶೋತ್ಸವದ ಪೆಂಡಾಲ್ ಗಳಲ್ಲಿ ಸಾವರ್ಕರ್ ಭಾವಚಿತ್ರ ಇಡುವಂತಾಯಿತು.
ಸಾವರ್ಕರ್ ಗೆ ಪಿಂಚಣಿ ಸಿಗಲು ಅವರು ಸರ್ಕಾರಿ ನೌಕರಿ ಮಾಡುತ್ತಿರಲಿಲ್ಲ. ತಮ್ಮ ಇಡೀ ಕುಟುಂಬವನ್ನೇ ದೇಶಕ್ಕಾಗಿ ತ್ಯಾಗ ಮಾಡಿದ ಶ್ರೇಷ್ಠ ಕುಟುಂಬ ಅವರದ್ದು. ಬ್ರಿಟಿಷರು ಸಾವರ್ಕರ್ ಗೆ ಎಷ್ಟೇ ಮಾನಸಿಕ ಹಿಂಸೆ ನೀಡಿದರೂ ಅವರೆಂದೂ ಕುಗ್ಗಲಿಲ್ಲ. ಭಾರತೀಯರಾದವರು ಜೀವನದಲ್ಲಿ ಒಮ್ಮೆಯಾದರೂ ಅಂಡಮಾನಿನ ಸೆಲ್ಯುಲರ್ ಜೈಲನ್ನು ದರ್ಶಿಸಬೇಕು. ಅವರು ಪಟ್ಟ ನರಕಯಾತನೆಯನ್ನು ನೋಡಿ ತಿಳಿಯಬೇಕು.
ಪ್ರಜ್ಞಾ ಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರ ಸಂಯೋಜಕ ರಘುನಂದನ ಸ್ವರಾಜ್ – 75 ಪುಸ್ತಕ ಪರಿಚಯಿಸಿದರು. ಗದಗನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ರೇಖಾ ಸೊನವಾನೆ ಮಾತನಾಡಿದರು.