ಆರೆಸ್ಸೆಸ್ ಟೀಕೆಗಿಳಿದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ಸಿಗೆ ಬಿಜೆಪಿ ಕೊಡುತ್ತಿರುವ ಉತ್ತರವೇನು?

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಪಠ್ಯಪುಸ್ತಕ ಪರಿಷ್ಕರಣೆ ಹಿನ್ನೆಲೆ ಇಟ್ಟುಕೊಂಡು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಿಜೆಪಿ ವಿರುದ್ಧ ಮಾಡುತ್ತಿರುವ ದಾಳಿಗಳಿಗೆ ಬಿಜೆಪಿಯಿಂದ ಪ್ರತ್ಯುತ್ತರಗಳು ದಾಖಲಾಗುತ್ತಿವೆ. ಈ ಪೈಕಿ, ರಾಜ್ಯ ಬಿಜೆಪಿ ಮುಖ್ಯ ವಕ್ತಾರರಾದ ಎಂ.ಜಿ. ಮಹೇಶ್ ಹಾಸನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಹಲವು ತಾರ್ಕಿಕ ಪ್ರತ್ಯುತ್ತರಗಳು ಬಂದಿವೆ. ಅವುಗಳ ಪ್ರಮುಖಾಂಶ ಹೀಗಿದೆ-

  • 70 ವರ್ಷಗಳ ಕಾಲ ಈ ದೇಶದಲ್ಲಿ ಶಿಕ್ಷಣ ಪದ್ಧತಿಯನ್ನು ಮಾಡಿದರು. ಯಾರೂ ಅದನ್ನು ಪ್ರಶ್ನಿಸಲು ಹೋಗಲಿಲ್ಲ. ಆದರೆ, ಪರಾಮರ್ಶೆ ಹೆಸರಿನಲ್ಲಿ ಮೂಲ ಸಂಗತಿಯನ್ನೇ ಅವಹೇಳನ ಮಾಡಲಾಗುತ್ತಿದೆ. ಪಾಕಿಸ್ತಾನ ತನ್ನ 5 ಸಾವಿರ ವರ್ಷಗಳ ಭವ್ಯ ಇತಿಹಾಸದಲ್ಲಿ ಪಾಣಿನಿಯ ವ್ಯಾಕರಣವನ್ನು ನೆನಪಿಸಿಕೊಳ್ಳುತ್ತದೆ. ಆದರೆ ಈ ಸಿದ್ದರಾಮಯ್ಯರಿಗೆ ಏನಾಗಿದೆ? ಈ ದೇಶದ ಮೌಲ್ಯಗಳ ಬಗ್ಗೆ ಅಪಮೌಲ್ಯದ ಮಾತನಾಡುತ್ತಿದ್ದಾರೆ.
  • ಹಿಂದೆ ಪಠ್ಯಪುಸ್ತಕದ ಪರಿಷ್ಕರಣೆ ಮಾಡುವಾಗ ಪೆರಿಯಾರ್ ಅವರ ಪಾಠವನ್ನು ಹಾಕಿದರು. ಪೆರಿಯಾರ್ ಮೂರ್ತಿಪೂಜೆ ಬಗ್ಗೆ ನಂಬಿಕೆ ಇರದ, ಗಣಪತಿ, ರಾಮನ ಫೋಟೋಗೆ ಚಪ್ಪಲಿ ಹಾರ ಹಾಕಿದ, ವಿಗ್ರಹಗಳನ್ನು ಪುಡಿ ಮಾಡಿದ ವ್ಯಕ್ತಿ. ಪೆರಿಯಾರ್ ಮಾಡಿದ್ದಕ್ಕೋಸ್ಕರ ಅಲ್ಲಿನ ಹಿಂದುಳಿದ ಜನ ಕಾವಡಿ ಆಂದೋಲನ ಆರಂಭಿಸಿದರು. ಪೆರಿಯಾರ್ ತಮಿಳುನಾಡಿನಲ್ಲಿ ಆರಂಭಿಸಿದ ದ್ರಾವಿಡ ಚಳವಳಿಗೆ ವಿರುದ್ಧವಾಗಿ ಅಲ್ಲಿನ ಜನರು ಆರ್ಯನ್ ಎಂಬ ಹೋಟೆಲ್‍ಗಳು, ಬೇಕರಿಗಳನ್ನು ತೆರೆದರು. ಇದರಲ್ಲಿ ಬಿಜೆಪಿ ಪಾತ್ರವೇನೂ ಇರಲಿಲ್ಲ.
  • ಮಾತೆತ್ತಿದರೆ ಮನುವಾದ ಎನ್ನುತ್ತಾರೆ. ದೇವರಿಲ್ಲ ಎಂದ ಚಾರ್ವಾಕನಿಗೆ ಈ ದೇಶದಲ್ಲಿ ಸಪ್ತಋಷಿಗಳಲ್ಲಿ ಸ್ಥಾನ ಕೊಟ್ಟಿದ್ದಾರೆ. ಈ ದೇಶದ ಬಹುತ್ವ ಮತ್ತು ಮೂಲ ನಿವಾಸಿಗಳ ಬಗ್ಗೆ ಪ್ರಶ್ನಿಸಲು ಸಿದ್ದರಾಮಯ್ಯನವರಿಗೆ ಯಾವ ನೈತಿಕತೆ ಇದೆ?
  • ಮಲ್ಲಿಕಾರ್ಜುನ ಖರ್ಗೆ ಅವರ ಅಸಹಿಷ್ಣುತೆ ಆರೋಪ ಮಾಡುತ್ತಾರೆ. ನಿನ್ನೆ ಕಲಬುರ್ಗಿಯಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ದಲಿತ ಯುವಕನನ್ನು ಕೊಲೆ ಮಾಡಿದ್ದರ ಬಗ್ಗೆ ಏಕೆ ಮೌನವಾಗಿದ್ದಾರೆ? ಉಡುಪಿಯ ಕುಂದಾಪುರದಲ್ಲಿ ಜಿಹಾದಿಗಳು ಮೋಸ ಮಾಡಿದರೆಂಬ ಕಾರಣಕ್ಕೆ ಹೆಣ್ಮಗಳು ಆತ್ಮಹತ್ಯೆ ಮಾಡಿಕೊಂಡಾಗ ಎಲ್ಲಿ ಹೋದಿರಿ ನೀವು?
  • ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಸುಟ್ಟು ಹಾಕಿದರು; ಸುಟ್ಟು ಹಾಕಿದ ವ್ಯಕ್ತಿ ಜೈಲಿನಿಂದ ಬಿಡುಗಡೆಯಾಗಿ ಬಂದಾಗ ಸಿದ್ದರಾಮಯ್ಯನವರ ಶಿಷ್ಯ ಜಮೀರ್ ಅವರನ್ನು ಮೆರವಣಿಗೆ ಮಾಡಿ ಕರೆತಂದರಲ್ಲವೇ?
  • ಈ ಮೊದಲು ಭಾರತದ ಸೋಲು, ವಿಫಲತೆಯನ್ನೇ ಹಿಂದೆ ಪಠ್ಯದಲ್ಲಿ ತರಲಾಯಿತು. ಭಾರತ ವಿಜೃಂಭಿಸಿದ್ದು ಎಲ್ಲೂ ಇಲ್ಲ. ಆದರೆ, ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಅಪಪ್ರಚಾರ ಮಾಡಲಾಯಿತು. ನಾರಾಯಣ ಗುರು, ಭಗತ್ ಸಿಂಗ್ ಅವರನ್ನು ಬಿಟ್ಟರೆಂದು ಸುದ್ದಿ ಹಬ್ಬಿಸುವ ಪ್ರಯತ್ನ ಮಾಡಿದರು. ಇದೆಲ್ಲ ಫಲ ಕೊಡದಿದ್ದಾಗ ಮೂಲನಿವಾಸಿಗಳ ವಿಚಾರ ಎತ್ತಿದ್ದಾರೆ. ಇದೊಂದು ವ್ಯವಸ್ಥಿತ ರೀತಿಯ ಪಿತೂರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!