ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ ಎಂದು ಹೇಳುವವರೆಲ್ಲ ಯಾವಾಗ ಕುರ್ಚಿ ಖಾಲಿ ಆಗುತ್ತೆ ಎಂದು ಕಾಯುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದ ವಿಚಾರವಾಗಿ, ಫ್ರೀಡಂ ಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಮಾತನಾಡಿದರು., ಈ ಸರ್ಕಾರ ದೇಶದ್ರೋಹಿಗಳ ವಿರುದ್ಧದ ಕೇಸ್ ವಾಪಸ್ ಪಡೆದಿದೆ. ಇವರು ವಾಲ್ಮೀಕಿ ನಿಗಮದ ಹಣ ಲೂಟಿ ಮಾಡಿ, ಮುಡಾ ಸೈಟ್ ಲೂಟಿ ಮಾಡಿ, ಎಸ್ಸಿಎಸ್ಪಿ, ಟಿಎಸ್ಪಿ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಅವರ ಶಾಸಕ ರಾಜು ಕಾಗೆಯವರೇ ಇಂಥ ಸರ್ಕಾರದಲ್ಲಿ ಶಾಸಕ ಆಗಿರೋದಕ್ಕಿಂತ ಆತ್ಮಹತ್ಯೆ ಲೇಸು ಎಂದಿದ್ದಾರೆ. ಅವರ ಶಾಸಕರೇ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸಮಯ ಹತ್ತಿರ ಆಗುತ್ತಿದೆ ಎಂದಿದ್ದಾರೆ.
ಇನ್ನೆಷ್ಟು ವರ್ಷ ಓಲೈಕೆ ರಾಜಕೀಯ ಮಾಡ್ತೀರಿ? ನಿಮ್ಮ ಯೋಗ್ಯತೆ ಹರಿಯಾಣ ಚುನಾವಣೆಯಲ್ಲಿ ಗೊತ್ತಾಗಿದೆ. ಜಮ್ಮು ಕಾಶ್ಮೀರ ಫಲಿತಾಂಶ ನೋಡಿಯೂ ಇವರಿಗೆ ಬುದ್ಧಿ ಬಂದಿಲ್ಲ. ಇದು ಹಿಂದು ವಿರೋಧಿ ಸರ್ಕಾರ ಎಂದು ಕಿಡಿಕಾರಿದ್ದಾರೆ.
ಸಿಎಂ ಕುರ್ಚಿ ಬಗ್ಗೆ ಮಾತಾಡಿದ್ದಕ್ಕೆ ವಿಜಯೇಂದ್ರ ಭವಿಷ್ಯ ಹೇಳ್ತಾನಾ ಎಂದಿದ್ದರು. ಹೌದು ನಾನು ಭವಿಷ್ಯ ಹೇಳಿದ್ದೇನೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎಂದು ಖರ್ಗೆ ಅವರಿಂದ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಖರ್ಗೆಯವರು ಆ ಮಾತು ಹೇಳ್ತಿಲ್ಲ. ತಪ್ಪಿಸಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪಾಪದ ಕೊಡ ತುಂಬಿದೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ, ಸಿದ್ದರಾಮಯ್ಯ ರಾಜೀನಾಮೆ ಕೊಡೋದು ಅಷ್ಟೇ ಸತ್ಯ ಎಂದಿದ್ದಾರೆ.