ದಿಗಂತ ವರದಿ ವಿಜಯಪುರ:
ಇಲ್ಲಿನ ಜ್ಞಾನಯೋಗಾಶ್ರಮದಲ್ಲಿ ಅಂತ್ಯಸಂಸ್ಕಾರ ನಡೆದ ಸಿದ್ದೇಶ್ವರ ಶ್ರೀಗಳ ಅಸ್ಥಿ ಸಂಗ್ರಹ ಕಾರ್ಯ ಗುರುವಾರ ಬೆಳಗ್ಗಿನ ಬ್ರಾಹ್ಮಿ ಮುಹೂರ್ತದಲ್ಲಿ ನಡೆದಿದ್ದು, ಜ.8 ಭಾನುವಾರ ನದಿ, ಸಾಗರದಲ್ಲಿ ಶ್ರೀಗಳ ಅಸ್ಥಿ ವಿಸರ್ಜನೆ ಕಾರ್ಯ ಮಾಡಲಾಗುವುದು ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀಗಳು ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ಮಾತನಾಡಿದ ಅವರು, ಶ್ರೀಗಳ ಚಿತಾಭಸ್ಮದಿಂದ ಅಸ್ಥಿಯನ್ನು ಐದು ಮಡಿಕೆಯಲ್ಲಿ ಸಂಗ್ರಹ ಮಾಡಲಾಯಿತು. ದೊಡ್ಡ ಮಡಿಕೆಯಲ್ಲಿ ಚಿತಾಭಸ್ಮ ಸಂಗ್ರಹಿಸಲಾಗಿದ್ದು, ಶ್ರೀಗಳ ಇಚ್ಛೆಯಂತೆ, ಕೂಡಲಸಂಗಮದ ತ್ರಿವೇಣಿ ಸಂಗಮ, ಗೋಕರ್ಣ ಸೇರಿದಂತೆ ಇತರೆಡೆ ವಿಧಿವಿಧಾನಗಳ ಮೂಲಕ ವಿಸರ್ಜನೆ ಮಾಡಲಾಗುವುದು. ನಾಳೆ ಹುಣ್ಣಿಮೆ ಇರುವುದರಿಂದ ಅಸ್ಥಿ ವಿಸರ್ಜನೆ ಮಾಡಲಾಗುತ್ತಿಲ್ಲ. ಸಿದ್ದೇಶ್ವರ ಅಪ್ಪನವರಿಗೆ ಕೃಷ್ಣೆ ಮೇಲೆ ಪ್ರೀತಿ ಇತ್ತು. ಅದರಂತೆ ಅವರ ಆಶಯದ ಮೇಲೆ ಅಸ್ಥಿ ವಿಸರ್ಜನೆ ಮಾಡಲಾಗುವುದು ಎಂದರು.