ಹೊಸದಿಗಂತ ವರದಿ, ಶಿವಮೊಗ್ಗ:
ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊಂಬುಜ ಜೈನಮಠದ ವತಿಯಿಂದ ಪ್ರತಿವರ್ಷ ಸಮಾಜ ಸಾಧಕರಿಗೆ ನೀಡುವ ‘ಸಿದ್ಧಾಂತಕೀರ್ತಿ’ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಜಯಪುರದ ಇಂಡಿಯ ರತನಚಂದ ನೇಮಿನಾಥ ಕೋಟಿ ಅವರಿಗೆ ನೀಡುವುದಾಗಿ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ತಿಳಿಸಿದ್ದಾರೆ.
ವಾರ್ಷಿಕ ಮಹಾರಥ ಯಾತ್ರಾ ಮಹೋತ್ಸವದ ಮುನ್ನ ದಿನವಾದ ಮಾ.31ರಂದು ಮಠದಲ್ಲಿ ಜರುಗುವ ಧಾರ್ಮಿಕ ಸಭೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ಸಾಧಕರ ಪರಿಚಯ
ರತನಚಂದ ನೇಮಿನಾಥ ಕೋಟಿರವರು 1943ನೇ ಜೂನ್ 6ರಂದು ಪದ್ಮಾವತಿ ಹಾಗೂ ನೇಮಿನಾಥ ಕೋಟಿ ದಂಪತಿಗಳ ಪುತ್ರರಾಗಿ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಜನಿಸಿದರು. ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರೈಸಿ, ಟಿಸಿಹೆಚ್ ತರಬೇತಿಯೊಂದಿಗೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಜೀವನ ಆರಂಭಿಸಿದರು. ತಮ್ಮ 45ನೇ ವಯಸ್ಸಿನಲ್ಲಿ ಜೈನಾಲಜಿ ವಿಷಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ ಬಿಡುವಿರುವ ಸಂದರ್ಭದಲ್ಲಿ ‘ಧ್ಯಾನ ಹಾಗೂ ಶಾಸ್ತ್ರಗಳನ್ನು ಬರೆಯುವ ಜೊತೆಗೆ ಧರ್ಮಪ್ರಚಾರದಲ್ಲಿಯೂ ತೊಡಗಿಕೊಂಡಿದ್ದರು. ಇವರ ಸೇವಾ ನಿಷ್ಠೆಯನ್ನು ಪರಿಗಣಿಸಿದ ಸರಕಾರ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.