ಹೊಸದಿಗಂತ ವರದಿ, ಶಿರಸಿ
ನಾಡಿನ ಪ್ರಸಿದ್ದ ಮಾರಿಕಾಂಬಾ ಜಾತ್ರೆಯ ರಥೋತ್ಸವ ಬುಧವಾರ ವೈಭವದಿಂದ ನಡೆಯಿತು.
ಸರ್ವಾಲಂಕಾರ ಭೂಷಿತ ಶ್ರೀ ಮಾರಿಕಾಂಬಾ ದೇವಿಯನ್ನು ಬೆಳಗ್ಗೆ ಅಲಂಕೃತ ರಥದಲ್ಲಿ ಜಾತ್ರಾ ಗದ್ದುಗೆಯತ್ತ ಕರೆದೊಯ್ಯುವ ವಿಧಿ ವಿಧಾನಗಳು ವಿಧ್ಯುಕ್ತವಾಗಿ ಪರಂಪರೆಯಂತೆ ನಡೆದವು. ಬೆಳಗ್ಗೆ 7 ಗಂಟೆಯಿಂದ ಧಾರ್ಮಿಕ ವಿಧಿವಿಧಾನಗಳು ನಡೆದವು.
ವಾದ್ಯ, ಡೊಳ್ಳುಕುಣಿತ, ಜಾನಪದ ಕಲೆಯೊಂದಿಗೆ ಅದ್ಧೂರಿಯಾಗಿ ರಥೋತ್ಸವದ ಶೋಭಾಯಾತ್ರೆ ಗಮನ ಸೆಳೆಯಿತು. ದೇವಿ ರಥಾರೂಢವಾಗುತ್ತಿದ್ದಂತೆಯೇ ಭಕ್ತಾದಿಗಳ ಜಯಘೋಷ ಮೊಳಗಿತು. ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ಅರ್ಧ ಕಿಲೋಮೀಟರ್ ದೂರದ ಜಾತ್ರಾ ಗದ್ದುಗೆ ರಥವನ್ನು ಭಕ್ತಾದಿಗಳು ಸುಮಾರು ಎರಡು ತಾಸುಗಳ ಅವಧಿಯಲ್ಲಿ ಎಳೆದರು. ನಂತರ ಜಾತ್ರಾ ಗದ್ದುಗೆಯಲ್ಲಿ ದೇವಿಯನ್ನು ಪ್ರತಿಷ್ಠಾಪಿಸುವ ಕಾರ್ಯ ನೆರವೇರಿತು.
ದೇವಾಲಯದ ಧರ್ಮದರ್ಶಿ ಮಂಡಳ ಸದಸ್ಯರು, ಸಹಸ್ತ್ರಾರು ಭಕ್ತಾದಿಗಳು ಪಾಲ್ಗೊಂಡು ಭಕ್ತಿಭಾವ ಮೆರೆದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ