ಹೊಸದಿಗಂತ ಡಿಜಿಟಲ್ ಡೆಸ್ಕ್
ಉತ್ತರ ಪ್ರದೇಶದಲ್ಲಿ ಮಂಗಳವಾರ ಮಳೆ ಆರ್ಭಟಕ್ಕೆ 18 ಜಿಲ್ಲೆಗಳಲ್ಲಿ 1,300 ಕ್ಕೂ ಹೆಚ್ಚು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ, ಜೊತೆಗೆ ಮಳೆ ಸಂಬಂಧಿತ ಘಟನೆಗಳಿಗೆ ಆರು ಮಂದಿ ಸಾವನ್ನಪ್ಪಿದ್ದಾರೆ.
ಅತಿವೃಷ್ಟಿಯಿಂದ ಮೂವರು ಮೃತಪಟ್ಟರೆ, ಸಿಡಿಲು ಬಡಿದು, ನೀರಿನಲ್ಲಿ ತೇಲಿಬಂದ ಹಾವು ಕಚ್ಚಿ, ನೀರಿನಲ್ಲಿ ಮುಳುಗಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ವರದಿ ತಿಳಿಸಿದೆ.
ಬಲರಾಂಪುರ ಜಿಲ್ಲೆಯಲ್ಲಿ ಒಟ್ಟು 287 ಗ್ರಾಮಗಳು, ಸಿದ್ಧಾರ್ಥನಗರದಲ್ಲಿ 129 ಗ್ರಾಮಗಳು, ಗೋರಖ್ಪುರದಲ್ಲಿ 120, ಶ್ರಾವಸ್ತಿಯಲ್ಲಿ 114, ಗೊಂಡಾದಲ್ಲಿ 110, ಬಹ್ರೈಚ್ನಲ್ಲಿ 102, ಲಖಿಂಪುರ ಖೇರಿಯಲ್ಲಿ 86 ಮತ್ತು ಬಾರಾಬಂಕಿ ಜಿಲ್ಲೆಯಲ್ಲಿ 82 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ ಎಂದು ಹೇಳಿಕೆ ತಿಳಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಪ್ರಾಣಹಾನಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ಮೊತ್ತವನ್ನು ತಕ್ಷಣವೇ ವಿತರಿಸಲು ಸೂಚಿಸಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಪಿಎಸಿ ತಂಡಗಳನ್ನು ನಿಯೋಜಿಸಲು ಅವರು ನಿರ್ದೇಶನ ನೀಡಿದ್ದಾರೆ.
ನಿರಂತರ ಮಳೆಯಿಂದಾಗಿ ಗಂಗಾ ನದಿ ಬದೌನ್ನಲ್ಲಿ (ಕ್ಯಾಚ್ಬ್ರಿಡ್ಜ್) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಲಖಿಂಪುರ ಖೇರಿಯಲ್ಲಿ ಶಾರದಾ ನದಿ (ಪಾಲಿಯಾಕಲನ್ ಮತ್ತು ಶಾರದಾನಗರ), ಬಾರಾಬಂಕಿಯ ಘಘರಾ ನದಿ (ಎಲ್ಜಿನ್ಬ್ರಿಡ್ಜ್), ಅಯೋಧ್ಯೆ ಮತ್ತು ಬಲ್ಲಿಯಾ (ತುರ್ತಿಪಾರ್), ಶ್ರಾವಸ್ತಿ (ಭಿಂಗಾ), ಬಲರಾಮ್ಪುರ, ಸಿದ್ಧಾರ್ಥನಗರ (ಬನ್ಸಿ) ಮತ್ತು ಗೋರಖ್ಪುರ (ಬರ್ದ್ಘಾಟ್) ನಲ್ಲಿರುವ ರಾಪ್ತಿ ನದಿಗಳು ಅಪಾಯವನ್ನು ದಾಟಿವೆ.
ಸಿದ್ಧಾರ್ಥನಗರ (ಕಾಕ್ರಾಹಿ) ನಲ್ಲಿರುವ ಬುಧಿ ರಾಪ್ತಿ ನದಿ, ಮಹಾರಾಜ್ಗಂಜ್ನಲ್ಲಿ (ತ್ರಿಮೋಹಿಂಗ್ಹಾಟ್) ರೋಹಿನ್ ನದಿ ಮತ್ತು ಗೊಂಡಾ (ಚಂದ್ರದೀಪ್ಘಾಟ್) ನಲ್ಲಿ ಕುವಾನೋ ನದಿ ಕೂಡ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಎಂದು ವರದಿ ತಿಳಿಸಿದೆ. ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸೋಮವಾರದಿಂದ ಭಾರೀ ಮಳೆಯಾಗುತ್ತಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ