ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ನಡುವೆ ವಿದ್ಯುನ್ಮಾನ ಮತಯಂತ್ರ ಕುರಿತಾಗಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ಇರಿಸಿರುವ ಕೇರಳ ಪೊಲೀಸರು ಮುಲಾಜಿಲ್ಲದೆ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದಾರೆ.
ಸಮಾಜದಲ್ಲಿ ಒಡಕು, ಘರ್ಷಣೆ, ದ್ವೇಷ ಹುಟ್ಟು ಹಾಕುವ, ಮತದಾರರನ್ನು ದಾರಿ ತಪ್ಪಿಸುವ ಸಂದೇಶ ರವಾನೆ, ಪ್ರಚಾರಕ್ಕೆ ಸಂಬಂಧಿಸಿ ಇದುವರೆಗೆ ಕೇರಳದಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. ಮಲಪ್ಪುರಂ, ಎರ್ನಾಕುಳಂ ನಗರ, ತ್ರಿಶೂರ್ ನಗರದಲ್ಲಿ ತಲಾ ಎರಡು ಪ್ರಕರಣ ದಾಖಲಾಗಿದ್ದರೆ, ತಿರುವನಂತಪುರಂ ಗ್ರಾಮಾಂತರ, ಕೊಲ್ಲಂ ನಗರ, ಪತ್ತನಂತಿಟ್ಟ, ಆಲಪ್ಪುಳ, ಪಾಲಕ್ಕಾಡ್ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಮಾನಿಟರಿಂಗ್ ತಂಡಗಳನ್ನು ಪೊಲೀಸರು ರಚಿಸಿದ್ದಾರೆ.