ಮುಡಿಪು ಶಾಲೆಯಲ್ಲಿ ಸ್ನೇಹ ಮಿಲನ: ಕಲಿತ ದಿನಗಳ ಮೆಲುಕು ಹಾಕಿದ ಹಿರಿಯ ವಿದ್ಯಾರ್ಥಿಗಳು

ಹೊಸದಿಗಂತ ವರದಿ ಮಂಗಳೂರು: 

ಅಲ್ಲಿ ಭಯಂಕರ ತಳಿರು ತೋರಣ ಇರಲಿಲ್ಲ, ಕಿವಿಗಡಚಿಕ್ಕುವ ಮೈಕ್ಕ್ ಇರಿಸಿರಲಿಲ್ಲ. ಹಾಡು, ಡ್ಯಾನ್ಸ್, ಡಿಜೆ, ಮೆರವಣಿಗೆ, ಮೃಷ್ಟಾನ್ನ ಭೋಜನ, ಬ್ಯಾಡ್ಜ್, ಪೂರ್ಣಕುಂಭ ಸ್ವಾಗತ ಎಂಥದ್ದೂ ಇರಲಿಲ್ಲ. ಆದರೂ ಬೆಳಗ್ಗೆ 10 ಗಂಟೆ ಆಗುತ್ತಿದ್ದ ಹಾಗೆ ಜನ ಎಲ್ಲೆಲ್ಲಿಂದ ಬಂದರು ಅಂತಲೇ ಗೊತ್ತಾಗ್ಲಿಲ್ಲ. ಗುಂಪು ಗುಂಪಾಗಿ, ವೈಯಕ್ತಿಕವಾಗಿ, ಬ್ಯಾಚುಗಳಲ್ಲಿ “ಹಳೆ ಮಕ್ಳು” ಬಂದದ್ದೇ ಬಂದದ್ದು…. ಹತ್ತೂಕಾಲಕ್ಕೆ ಸಭಾ ಕಾರ್ಯಕ್ರಮ ಸ್ವಲ್ಪ ಲೇಟಾಗಿ ಶುರುವಾಗುವಾಗ ಶಾಲೆಯ ಅಷ್ಟು ದೊಡ್ಡ ಗ್ರೌಂಡು ಅಕ್ಷರಶಃ “ಹೌಸ್ ಫುಲ್” ಆಗಿತ್ತು…!

ಇತ್ತೀಚೆಗೆ ನಡೆದ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಶ್ರೀ ಭಾರತಿ ಅನುದಾನಿತ ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿಗಳ ಸ್ನೇಹ ಮಿಲನ ಕಾರ್ಯಕ್ರಮದ ಪಕ್ಷಿನೋಟ ಇದು.

1948ರಲ್ಲಿ ಪ್ರಾರಂಭವಾದ ಶಾಲೆ 2023ರಲ್ಲಿ ಅಮೃತ ಮಹೋತ್ಸವ ಆಚರಿಸಲಿದೆ. ಇದಕ್ಕೆ ಪೂರ್ವಭಾವಿಯಾಗಿ ಹಳೆ ವಿದ್ಯಾರ್ಥಿಗಳ ಸಂಘ ರಚಿಸಲಾಗಿದ್ದು, ನ.6ರಂದು ಭಾನುವಾರ ಹಳೆ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆಸಿ ಪರಿಚಯ ಮಾಡಿಸುವ ಸ್ನೇಹ ಮಿಲನ ಕಾರ್ಯಕ್ರಮ ಶಾಲಾಡಳಿತ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ನಡೆಯಿತು.

ವೇದಿಕೆಯಲ್ಲಿ ಇರಿಸಲಾಗಿದ್ದ ಬೋರ್ಡಿನಲ್ಲಿ ಸಂಸ್ಥೆಯ ಹಿರಿಯ ಶಿಕ್ಷಕರು ಅ..ಆ… ಇ….ಈ ಬರೆಯುವ ಮೂಲಕ, 2023ರ ಕಿರು ಕ್ಯಾಲೆಂಡರ್ ನ್ನು ಅನಾವರಣಗೊಳಿಸುವ ಮೂಲಕ ಹಾಗೂ ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಂಡಿತು.

ಭಾಸ್ಕರ ಮೂಳೂರು ಪ್ರಾರ್ಥಿಸಿದರು. ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ಸ್ವಾಗತಿಸಿದರು. ಸಂಚಾಲಕ ಸುಬ್ರಹ್ಮಣ್ಯ ಭಟ್ ಶಾಲೆ ನಡೆದು ಬಂದ ದಾರಿಯನ್ನು ತಿಳಿಸಿದರು. ನ್ಯಾಯವಾದಿ ಮಹಮ್ಮದ್ ಅಸ್ಗರ್ ಪ್ರಾಸ್ತಾವಿಕ ಮಾತನಾಡಿದರು. ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವೈದ್ಯ ಡಾ.ಅರುಣ್ ಪ್ರಸಾದ್ ವಂದಿಸಿದರು. ಕೃಷ್ಣಮೋಹನ ನಿರೂಪಿಸಿದರು. ಶಾಲೆಯ ಅಮೃತ ಮಹೋತ್ಸವಕ್ಕೆ ನೂತನ ಸಮಿತಿ ರಚನೆ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ನಡೆಯಿತು.

ಮಧ್ಯಾಹ್ನ ಶಾಲಾಡಳಿತ ವತಿಯಿಂದ ಸಹಭೋಜನ, ಗ್ರೂಪ್ ಫೋಟೋ ಸೆಷನ್ ನಡೆಯಿತು. ಅಪರಾಹ್ನದ ಬಳಿಕ ಹಳೆ ವಿದ್ಯಾರ್ಥಿಗಳು ಶಾಲೆಯ ತಮ್ಮ ನೆನಪುಗಳನ್ನು ಮೆಲುಕು ಹಾಕಿದರು. ಶಶಿಕಲಾ ಟೀಚರ್ ತೆರೆದಿಟ್ಟ ನೆನಪುಗಳ ಬುತ್ತಿಯ ಮಾದರಿಯಲ್ಲೇ ನಂತರ ಸಂಚಾಲಕ ಸುಬ್ರಹ್ಮಣ್ಯಭಟ್, ಪ್ರಶಾಂತ್ ಗಟ್ಟಿ, ಪ್ರಶಾಂತ್ ಕಾಜವ, ಡಾ.ಅಬೂಬಕ್ಕರ್ ಸಿದ್ದೀಕ್, ಪ್ರೊ.ಹೈದರಾಲಿ, ಲಾಡ ರಾಮಕೃಷ್ಣ ಭಟ್, ಪೂರ್ಣಿಮಾ ಕಾಮತ್, ಡಾ.ರಶ್ಮಿ ಅಮ್ಮೆಂಬಳ, ಇರಾ ನೇಮು ಪೂಜಾರಿ, ಶಬೀನಾ, ಚಂದ್ರಹಾಸ ಕಣಂತೂರು ಸಹಿತ ಹಲವರು ಈ ಸಂದರ್ಭ ಮಾತನಾಡಿದರು.

ಬಳಿಕ ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್. ಮಾತನಾಡಿದರು. ನೂತನ ಪ್ರಧಾನ ಕಾರ್ಯದರ್ಶಿ, ನ್ಯಾಯವಾದಿ ಮೊಹಮ್ಮದ್ ಅಸ್ಗರ್ ವಂದಿಸಿದರು. ಶಾಲೆಯ ಪ್ರಧಾನ ಕಟ್ಟಡದಲ್ಲಿ ಆರಂಭಿಸಿದ ಅಮೃತ ಮಹೋತ್ಸವದ ಶಾಶ್ವತ ಕಚೇರಿಯನ್ನು ಈ ಸಂದರ್ಭ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಹಳೆ ವಿದ್ಯಾರ್ಥಿ ಡಾ.ಅರುಣ್ ಪ್ರಸಾದ್ ದಂಪತಿ ನೇತೃತ್ವದಲ್ಲಿ, ಸ್ನೇಹಂಸಂಗಮಕ್ಕೆ ಆಗಮಿಸಿದವರಿಗೆ ಉಚಿತವಾಗಿ ಮಧುಮೇಹ ತಪಾಸಣೆ ನಡೆಯಿತು. ಶಾಲೆಯ ಹಿರಿಯ ಹಳೆ ವಿದ್ಯಾರ್ಥಿ, ಅಬ್ಬಕ್ಕ ಟಿ.ವಿ.ವಾಹಿನಿ ಮುಖ್ಯಸ್ಥ ಶಶಿಧರ ಪೊಯ್ಯತ್ತಬೈಲು ಅವರನ್ನು ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾದ ಹಿನ್ನೆಲೆಯಲ್ಲಿ ಗೌರವಿಸಲಾಯಿತು.

ಮನೆ ಮನೆ ಭೇಟಿ ಹಾಗೂ ಜಾಲತಾಣಗಳ ಪ್ರಚಾರದಿಂದಲೇ ಸಾಕಷ್ಟು ಹಳೆ ವಿದ್ಯಾರ್ಥಿಗಳು ಮಾಹಿತಿ ಪಡೆದು ಆಗಮಿಸಿದರು. ಸುಮಾರು 200 ಮಂದಿ ಹಳೆ ವಿದ್ಯಾರ್ಥಿಗಳು ಸಕ್ರಿಯರಾಗಿ ಪಾಲ್ಗೊಂಡರು. ಸ್ನೇಹ ಮಿಲನದಂದು ಹಳೆ ವಿದ್ಯಾರ್ಥಿ ಸಂಘಕ್ಕೆ ಹೊಸದಾಗಿ 57 ಆಜೀವ ಸದಸ್ಯರು ಹಾಗೂ 80 ವಾರ್ಷಿಕ ಸದಸ್ಯರು ಸೇರಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!