ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್ ನಲ್ಲಿ ಕಳೆದ ದಿನಗಳಿಂದ ಅಕಾಲಿಕ ಹಿಮಪಾತ ಮತ್ತು ಭಾರಿ ಮಳೆಯಿಂದಾಗಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಇಲ್ಲಿನ ಲಾಮಯೂರು ಬಳಿಯಲ್ಲಿ ಲೇಹ್-ಕಾರ್ಗಿಲ್-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಉಂಟಾಗಿದ್ದು, ಹೆದ್ದಾರಿಯನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಕಾರ್ಗಿಲ್ ನ ರಂಗ್ಡಮ್ ಗ್ರಾಮವು ಸುಮಾರು ಮೂರು ಇಂಚುಗಳಷ್ಟು ಹಿಮಪಾತಕ್ಕೆ ಸಾಕ್ಷಿಯಾಗಿದೆ. ಪೆನ್ಸಿಲಾ, ಝನ್ಸ್ಕರ್ ಮತ್ತು ಕಾರ್ಗಿಲ್ ಸುತ್ತಮುತ್ತಲಿನ ಬೆಟ್ಟಗಳು ಸೇರಿದಂತೆ ಇತರ ಪ್ರದೇಶಗಳು ಸಹ ಹಿಮದ ಹೊದಿಕೆಯಿಂದ ಆವೃತವಾಗಿವೆ .ಮುಂಜಾಗ್ರತಾ ಕ್ರಮವಾಗಿ ಕಾರ್ಗಿಲ್-ಜನ್ಸ್ಕಾರ್ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ 24 ಗಂಟೆಗಳ ಕಾಲ ಈ ಪ್ರದೇಶಕ್ಕೆ ರೆಡ್ ಅಲರ್ಟ್ ಘೋಷಿಸುವುದರ ಜೊತೆಗೆ ಭಾನುವಾರ ಮಳೆ ಮತ್ತು ಹಿಮಪಾತ ಮುಂದುವರಿಯುತ್ತದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ಜನರು ಜಾಗರೂಕರಾಗಿರಲು ಮತ್ತು ಹಿಮ ಪೀಡಿತ ಪ್ರದೇಶಗಳಿಂದ ದೂರವಿರುವಂತೆ ಸೂಚಿಸಲಾಗಿದೆ ಎಂದು ಹವಾಮಾನ ಇಲಾಖೆಯ ವಕ್ತಾರರು ತಿಳಿಸಿದ್ದಾರೆ. ನದಿಗಳು ಮತ್ತು ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಗಮನಾರ್ಹ ಏರಿಕೆಯ ದೃಷ್ಟಿಯಿಂದಾಗಿ ಹಠಾತ್ ಪ್ರವಾಹವನ್ನು ತಳ್ಳಿಹಾಕುವಂತಿಲ್ಲ. ಆದಾಗ್ಯೂ, ಜುಲೈ 10 ರಿಂದ 14ರವರೆಗೆ ಕೆಲವು ಸ್ಥಳಗಳಲ್ಲಿ ಮಳೆಯೊಂದಿಗೆ ಶುಷ್ಕ ಹವಾಮಾನವಿರಲಿದೆ ಎಂದಿದ್ದಾರೆ.