ಹೊಸದಿಗಂತ ಡಿಜಿಟಲ್ ಡೆಸ್ಕ್:
ಲಡಾಖ್ಗೆ (Ladakh) ರಾಜ್ಯ ಸ್ಥಾನಮಾನ ಮತ್ತು ದುರ್ಬಲವಾದ ಹಿಮಾಲಯನ್ ಪರಿಸರವನ್ನು ರಕ್ಷಿಸಲು ಒತ್ತಾಯಿಸಿ ಕಳೆದ 21ದಿನಗಳಿಂದ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ಸುಧಾರಕ ಸೋನಮ್ ವಾಂಗ್ಚುಕ್ (Sonam Wangchuk) ಅವರುಉಪವಾಸ ಸತ್ಯಾಗ್ರಹವನ್ನು (hunger strike) ನಡೆಸುತ್ತಿದ್ದು, ಇಂದು ಕೊನೆಗೊಳಿಸಿದ್ದಾರೆ.
ಇಲ್ಲಿವರೆಗೆ ಉಪ್ಪು ಮತ್ತು ನೀರು ಮಾತ್ರ ಸೇವಿಸಿ ವಾಂಗ್ಚುಕ್ ಪ್ರತಿಭಟನೆ ನಿರತರಾಗಿದ್ದರು. ಇದೀಗ ಇಂದು ಉಪವಾಸ ಸತ್ಯಾಗ್ರಹ ಕೈ ಬಿಟ್ಟಿದ್ದು, ಆದ್ರೆ ಲಡಾಖ್ಗೆ ಸಾಂವಿಧಾನಿಕ ರಕ್ಷಣೆ ಮತ್ತು ಜನರ ರಾಜಕೀಯ ಹಕ್ಕುಗಳಿಗಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ ಎಂದಿದ್ದಾರೆ.
ಉಪವಾಸ ಅಂತ್ಯಗೊಳ್ಳುತ್ತಿದ್ದಂತೆ ಕೇಂದ್ರಾಡಳಿತ ಪ್ರದೇಶದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದು, ಇದೀಗ ಅದೇ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಹಿಳಾ ಸಂಘಟನೆಗಳು ಹೇಳಿವೆ.
ಮಾರ್ಚ್ 6 ರಂದು ಅವರು ತಮ್ಮ ಉಪವಾಸವನ್ನು ಪ್ರಾರಂಭಿಸಿದಾಗ ಇದು ಆಮರಣಾಂತ ಉಪವಾಸ ಸತ್ಯಾಗ್ರಹ ಎಂದು ವಾಂಗ್ಚುಕ್ ಹೇಳಿದ್ದರು.
ಇದಕ್ಕೂ ಮುನ್ನ ಸೋನಮ್ ವಾಂಗ್ಚುಕ್, ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುವಂತೆ ಮತ್ತು ಲಡಾಖ್ ಜನರ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿದ್ದರು. ನಾವು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜಿ ಅವರನ್ನು ಕೇವಲ ರಾಜಕಾರಣಿಗಳು ಎಂದು ಭಾವಿಸಲು ಬಯಸುವುದಿಲ್ಲ, ನಾವು ಅವರನ್ನು ಪ್ರತಿನಿಧಿಗಳು ಎಂದು ಭಾವಿಸಲು ಬಯಸುತ್ತೇವೆ ಆದರೆ, ಅದಕ್ಕಾಗಿ ಅವರು ದೂರದೃಷ್ಟಿಯನ್ನು ತೋರಿಸಬೇಕಾಗುತ್ತದೆ ಎಂದು ಅವರು ಹೇಳಿದರು.