ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರ ಬಳಿಕ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿ ಬಯಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಚುರುಕುಗೊಳಿಸಿರುವ ದೆಹಲಿ ಸಿಎಂ, ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ತೀವ್ರ ಟೀಕೆ ಪ್ರಹಾರ ನಡೆಸಿದರು.
ನಾನು ಗುಜರಾತ್ನಲ್ಲಿ ಕೆಲ ಕ್ಷೇತ್ರಗಳಿಗೆ ಭೇಟಿ ನೀಡಿದ್ದೇನೆ. ಆ ಭಾಗದ ಯಾವೊಬ್ಬ ಶಾಸಕರೂ ಕೂಡ ನನ್ನ ಹಾಗೆ ಮತ ಕೇಳಲು ಬರುವುದಿಲ್ಲ. ಇದು ಬಿಜೆಪಿಗರ ದುರಹಂಕಾರವನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿ ದುರಹಂಕಾರದ ಜನರೇ ತುಂಬಿಕೊಂಡಿದ್ದಾರೆ. ಅವರಿಗೇಕೆ ನೀವು ಮತ ನೀಡಬೇಕು. ಅವರಂತೆ ನಾನು ದುರಹಂಕಾರಿಯಲ್ಲ. ನಾನು ಸಾಮಾನ್ಯ ಮನುಷ್ಯ. ಜನರ ನಡುವೆ ಬದುಕುತ್ತಿದ್ದೇವೆ. ನಾನು ಒಬ್ಬ ರಿಕ್ಷಾ ಡ್ರೈವರ್ನ ಮನೆಯಲ್ಲಿ ಊಟ ಮಾಡಿದ್ದೆ. ಆತನ ಸಂಕಷ್ಟಗಳನ್ನು ಅರಿಯಬಲ್ಲೆ. ಇದು ಬಿಜೆಪಿಗರಿಂದ ಸಾಧ್ಯವಿಲ್ಲ ಎಂದರು.
ಮೋದಿ ಬಳಿಕ ಸೋನಿಯಾ ಪ್ರಧಾನಿ:
ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ಬಿಜೆಪಿಯೇ ಯೋಜಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬಿಜೆಪಿಗರೇ ಈ ಬಗ್ಗೆ ಹೇಳಿದ್ದಾರೆ. ಅವರನ್ನೂ ಈ ಬಗ್ಗೆ ಪ್ರಶ್ನಿಸಿ ನೋಡಿ ಎಂದು ಪತ್ರಕರ್ತರಿಗೇ ಮರು ಪ್ರಶ್ನೆ ಹಾಕಿದರು.