ಆಸ್ತಿಗಾಗಿ ಸುಪಾರಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿದ ಪುತ್ರರು: ಐವರನ್ನು ಬಂಧಿಸಿದ ಖಾಕಿಪಡೆ

ಹೊಸದಿಗಂತ ವರದಿ, ಶಿವಮೊಗ್ಗ :
ಆಸ್ತಿಗಾಗಿ ಸುಪಾರಿ ನೀಡಿ ತಂದೆಯನ್ನೇ ಕೊಲೆ ಮಾಡಿಸಿದ್ದ ಇಬ್ಬರು ಮಕ್ಕಳು ಹಾಗೂ ಕೊಲೆ ಮಾಡಿರುವ ಮೂವರನ್ನು ಶಿರಾಳಕೊಪ್ಪ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೊಲೆಯಾಗಿರುವ ಶಿಕಾರಿಪುರ ತಾಲೂಕಿನ ಭೋಗಿ ಗ್ರಾಮದ ನಾಗೇಂದ್ರಪ್ಪ ಎಂಬುವರ ಮಕ್ಕಳಾದ ಮಂಜುನಾಥ (42), ಕೋರಮಂಗಲದ ಕೆಎಸ್‌ಆರ್‌ಪಿ 4 ನೇ ಬೆಟಾಲಿಯನ್‌ನಲ್ಲಿ ಎಚ್‌ಸಿ ಆಗಿರುವ ಉಮೇಶ್ (40) ಹಾಗೂ ಕೊಲೆ ಮಾಡಿರುವ ಭೋಗಿ ಗ್ರಾಮದ ರಿಜ್ವಾನ್ (21), ಶಿಕಾರಿಪುರದ ಹಬೀಬುಲ್ಲಾ (28) ಹಾಗೂ ಸುಹೈಲ್ ಬಾಷಾ(30) ಬಂತ ಆರೋಪಿಗಳಾಗಿದ್ದಾರೆ.
ಪ್ರಕರಣದ ವಿವರ : ಭೋಗಿ ಗ್ರಾಮದ ನಾಗೇಂದ್ರಪ್ಪ ಹೆಸರಿನಲ್ಲಿ ಐದೂವರೆ ಎಕರೆ ಜಮೀನಿದ್ದು, ಇದರಲ್ಲಿ 5 ಎಕರೆ ಅಡಿಕೆ ಹಾಗೂ ಅರ್ಧ ಎಕರೆ ಭತ್ತ ಬೆಳೆಯುತ್ತಿದ್ದರು. ಇವರ ಮಕ್ಕಳಾದ ಮಂಜುನಾಥ ಹಾಗೂ ಉಮೇಶ್ ಆಸ್ತಿಯಲ್ಲಿ ಪಾಲು ಕೇಳಿದ್ದು, ಇದಕ್ಕೆ ನಾಗೇಂದ್ರಪ್ಪ ಒಪ್ಪಿರಲಿಲ್ಲ. ಪಂಚಾಯಿತಿ ನಡೆಸಿ ಮೂರು ಹಿಸ್ಸೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ ಸರ್ವೇ ಮಾಡಲು ಬಿಟ್ಟಿರಲಿಲ್ಲ.
ತಕರಾರು ಮಾಡುತ್ತಿದ್ದ ನಾಗೇಂದ್ರಪ್ಪ 29-11-21 ರಂದು 2 ನೇ ಮದುವೆಯಾಗಿದ್ದು, ಗಂಡು ಮಗು ಕೂಡ ಜನಿಸಿತ್ತು. ಇದರಿಂದ ಬೇಸತ್ತ ಇಬ್ಬರು ಮಕ್ಕಳೂ ಆಸ್ತಿ ತಮ್ಮ ಕೈತಪ್ಪುತ್ತದೆ ಎಂದು ಭಾವಿಸಿ ತಂದೆಯ ಕೊಲೆಗೆ ಸುಪಾರಿ ನೀಡಿದ್ದರು. ಸುಪಾರಿ ಪಡೆದಿದ್ದ ರಿಜ್ವಾನ್, ಹಬೀಬುಲ್ಲಾ ಇಬ್ಬರೂ ಸುಹೈಲ್ ಬಾಷಾನೊಂದಿಗೆ ಸೇರಿಕೊಂಡು 29.11.2022 ರಂದು ನಾಗೇಂದ್ರಪ್ಪ ಬರುತ್ತಿದ್ದ ಬೈಕ್‌ಗೆ ಗೂಡ್ಸ್ ವಾಹನದಿಂದ ಕುಸ್ಕೂರು ಬಳಿ ಡಿಕ್ಕಿ ಹೊಡೆಸಿ ಗಾಯಗೊಳಿಸಿದ್ದರು. ಬಳಿಕ ಇನ್ನೊಂದು ವಾಹನದಲ್ಲಿ ಇವರನ್ನು ಕೂರಿಸಿಕೊಂಡು ವಿಷ ಮಿಶ್ರಿತ ನೀರು ಕುಡಿಸಿ, ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಉಡುಗಣಿ ಸಮೀಪದ ನಿರ್ಮಾಣ ಹಂತದಲ್ಲಿದ್ದ ನಾಲೆಗೆ ಎಸೆದಿದ್ದರು.
ಈ ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸರು ಕೂಲಂಕಷ ತನಿಖೆ ನಡೆಸಿ ಕೊಲೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!