ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಶನಿವಾರ ಮಳೆಯಿಂದಾಗಿ ದೆಹಲಿಯ ವಾತಾವರಣ ಬದಲಾಗಿದೆ. ಇಂದು ಬೆಳ್ಳಂಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ವರುಣ ತನ್ನ ಆಟ ಶುರುವಿಟ್ಟುಕೊಂಡಿದ್ದಾನೆ. ದೆಹಲಿಯ ಹಲವೆಡೆ ಲಘು ಮಳೆಯಾಗಿದ್ದು, ವಾತಾವರಣವನ್ನು ತಂಪಾಗಿಸಿದೆ. ಇನ್ನೆರಡು ಮೂರು ದಿನಗಳಲ್ಲಿ ಭಾರೀ ಗಾಳಿ ಹಾಗೂ ಲಘು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ಪ್ರಾದೇಶಿಕ ಹವಾಮಾನ ಕೇಂದ್ರವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮತ್ತು ನಾಳೆ ಮಧ್ಯಾಹ್ನ ಲಘು ಮಳೆಯಾಗುವ ಮುನ್ಸೂಚನೆ ನೀಡಿದೆ. ದೆಹಲಿಯ ಕೆಲವು ಭಾಗಗಳಲ್ಲಿ ಶನಿವಾರ ಮುಂಜಾನೆ ಹಠಾತ್ ಮಳೆಯಿಂದಾಗಿ ದೆಹಲಿ ತೊಯ್ದು ತೊಪ್ಪೆಯಾಗಿದೆ. ನೈಋತ್ಯ ದೆಹಲಿಯ ವಸಂತ್ ಕುಂಜ್, ಮುನಿರ್ಕಾ ಮತ್ತು ನರೇಲಾ ಪ್ರದೇಶಗಳು ಸೇರಿದಂತೆ ದೆಹಲಿಯಲ್ಲಿ ಶನಿವಾರ ಮುಂಜಾನೆ ತುಂತುರು ಮಳೆ ಆವರಿಸಿತ್ತು.
ಮಳೆಯ ಹಿನ್ನೆಲೆಯಲ್ಲಿ ಐಎಂಡಿ ಅಧಿಕಾರಿಗಳು ಆರೆಂಜ್ ಅಲರ್ಟ್ ಘೋಷಿಸಿದ್ದು, ಎಂಸಿಡಿ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ವೇಳೆ ಯಾವುದೇ ಅನಾಹುತ ಘಟನೆಗಳು ಸಂಭವಿಸಿದಂತೆ ಎಚ್ಚರ ವಹಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.