ಹೊಸ ದಿಗಂತ ಡಿಜಿಟಲ್ ಡೆಸ್ಕ್
ಶ್ರೀಲಂಕಾದಲ್ಲಿ ಹದಗೆಟ್ಟಿರುವ ಆರ್ಥಿಕ ಪರಿಸ್ಥಿತಿ ಅಲ್ಲಿನ ಮಂದಿಗೆ ದಿನ ಕಳೆಯುವುದನ್ನೂ ದುಸ್ತರವಾಗಿಸಿದೆ. ಶುಕ್ರವಾರ ಆಕ್ರೋಶಿತ ಜನರ ಗುಂಪೊಂದು ಶ್ರೀಲಂಕಾ ಅಧ್ಯಕ್ಷ ಗೊಟಬಾಯಾ ರಾಜಪಕ್ಷರ ನಿವಾಸವನ್ನು ಮುತ್ತಿಗೆ ಹಾಕಲು ಪ್ರಯತ್ನಿಸಿದ ಬೆನ್ನಲ್ಲೇ ಆ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶ್ರೀಲಂಕಾ ಅಧ್ಯಕ್ಷ ಯಾರನ್ನು ಬೇಕಾದರೂ ಬಂಧನದಲ್ಲಿರಿಸಬಹುದು. ಯಾವುದೇ ವ್ಯಕ್ತಿ ಅಥವಾ ವಾಸಸ್ಥಾನವನ್ನು ತಪಾಸಣೆಗೆ ಒಳಪಡಿಸಬಹುದು. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಯಾವ ಕಾನೂನನ್ನಾದರೂ ಊರ್ಜಿತಗೊಳಿಸಬಹುದು ಹಾಗೂ ಇನ್ಯಾವ ಕಾನೂನನ್ನಾದರೂ ಸಂಸತ್ತಿನ ಒಪ್ಪಿಗೆ ಹೊರತಾಗಿ ಜಾರಿಗೆ ತರಬಹುದು.