ಹೊಸದಿಗಂತ ಡಿಜಿಟಲ್ ಡೆಸ್ಕ್:
ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ಹೇಗೋ, ಕಲಿಯುಗದಲ್ಲಿ ಸಿಎಂ ಬೊಮ್ಮಾಯಿ ಹಾಗೆಯೇ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಬೆಂಗಳೂರಿನಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅನೇಕ ಜಯಂತ್ಯುತ್ಸವ ನೋಡಿದ್ದೇವೆ. ಆದರೆ ಇವತ್ತಿನ ಕಾರ್ಯಕ್ರಮ ಬಂಗಾರದ ಅಕ್ಷರದಲ್ಲಿ ಬರೆಯುವ ದಿನ. ಇದು ಐತಿಹಾಸಿಕ ದಿನವಾಗಿದೆ. ಮೀಸಲಾತಿ ಬಗ್ಗೆ ಐತಿಹಾಸಿಕವಾಗಿ ತೆಗೆದುಕೊಂಡ ತೀರ್ಮಾನವಾಗಿದೆ. ಅನೇಕ ವರ್ಷಗಳಿಂದ ಹೋರಾಟ ಮಾಡುತ್ತಿದ್ದೆವು.ತ್ರೇತಾಯುಗದಲ್ಲಿ ಶ್ರೀರಾಮನಿದ್ದಂತೆ ಕಲಿಯುಗದ ಶ್ರೀರಾಮಚಂದ್ರ ಸಿಎಂ ಬಸವರಾಜ ಬೊಮ್ಮಾಯಿ ಆಗಿದ್ದಾರೆ. ದಲಿತ ಸಮುದಾಯಕ್ಕೆ ನ್ಯಾಯ ಕೊಟ್ಟಿದ್ದಾರೆ. ಎಷ್ಟು ದಿನ ನಾವು ಬದುಕಿರುತ್ತೇವೆಯೋ ಅಷ್ಟು ದಿನ ಈ ತೀರ್ಮಾನವನ್ನು ಮರೆಯುವಂತಿಲ್ಲ ಎಂದು ಶ್ಲಾಘಿಸಿದರು.
ಬೊಮ್ಮಾಯಿ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು. ಇಂದು ಬಸವರಾಜ ಬೊಮ್ಮಾಯಿ ಸಾಮಾಜಿಕ ಹರಿಕಾರ. ನಮ್ಮ ಸಮುದಾಯದ ಜನ ವಿಧಾನಸೌಧದ ಈ ಮೆಟ್ಟಿಲು ನೋಡಿಯೇ ಇರಲಿಲ್ಲ. ನಾನು ಅವತ್ತೇ ಹೇಳಿದ್ದೆ. ಮೀಸಲಾತಿ ಕೊಡಲು ನನ್ನ ಸರ್ಕಾರ ಬರಬೇಕು ಅಂದಿದ್ದೆ, ಹಾಗೆಯೇ ಆಯಿತು ಎಂದು ಸಚಿವ ಶ್ರೀರಾಮುಲು ಹೇಳಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆವತ್ತು ವಾಲ್ಮೀಕಿ ಜಯಂತಿ ಆಗಬೇಕು ಎಂದು ಜಯಂತಿ ಘೋಷಣೆ ಮಾಡಿದ್ದರು. ಇದೀಗ ಮೀಸಲಾತಿ ಹೆಚ್ಚಿಸಿದ ಸಿಎಂ ಬೊಮ್ಮಾಯಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ಆಗಿನ ಪಿಎಂ ಅಟಲ್ ಬಿಹಾರಿ ವಾಜಪೇಯಿ ಅವರು ಪರಿಶಿಷ್ಟ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಮಾಡಿದ್ದರು ಎಂದರು.