ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಸರಣಿ ರಜೆಗಳ ಜೊತೆಗೆ ಶ್ರಾವಣ ಮಾಸವಾಗಿದ್ದರಿಂದ ಆಗಸ್ಟ್ ತಿಂಗಳಿನಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ಭೇಟಿ ನೀಡಿದ್ದರು. ಆಗಸ್ಟ್ ತಿಂಗಳೊಂದರಲ್ಲೇ 22.22 ಲಕ್ಷ ಭಕ್ತರು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಂದರೆ ಕಳೆದ ತಿಂಗಳು ಒಂದು ದಿನದಲ್ಲಿ 71 ಸಾವಿರಕ್ಕೂ ಹೆಚ್ಚು ಮಂದಿ ಸ್ವಾಮಿಯ ದರ್ಶನ ಪಡೆದಿದ್ದಾರೆ.
ಆಗಸ್ಟ್ ತಿಂಗಳಲ್ಲಿ ಹುಂಡಿಯ ಕಾಣಿಕೆ 140.34 ಕೋಟಿ ರೂಪಾಯಿ ಇದು ತಿರುಮಲ ಇತಿಹಾಸದಲ್ಲೇ ಅತಿ ಹೆಚ್ಚು. ಆಗಸ್ಟ್ ತಿಂಗಳಲ್ಲಿ 1.05 ಕೋಟಿ ಶ್ರೀವಾರಿ ಲಡ್ಡುಗಳು ಮಾರಾಟವಾಗಿವೆ. 47.76 ಲಕ್ಷ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದಾರೆ. 10.85 ಲಕ್ಷ ಭಕ್ತರು ಕಾಣಿಕೆ ಹರಕೆ ಸಮರ್ಪಿಸಿದ್ದಾರೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಶ್ರೀವಾರಿ ಹುಂಡಿಗೆ ರೂ.128 ಕೋಟಿ, ಏಪ್ರಿಲ್ ತಿಂಗಳಲ್ಲಿ ರೂ.127.5 ಕೋಟಿ, ಮೇ ತಿಂಗಳಲ್ಲಿ ರೂ. 130.50 ಕೋಟಿ, ಜೂನ್ ತಿಂಗಳಲ್ಲಿ 120 ಕೋಟಿ, ಜುಲೈ ತಿಂಗಳಲ್ಲಿ ರೂ. 139.45 ಕೋಟಿ ಆದಾಯ ಬಂದಿದೆ. ಆ ದಾಖಲೆಗಳನ್ನು ಬುಡಮೇಲು ಮಾಡಿ ಆಗಸ್ಟ್ ತಿಂಗಳಲ್ಲೇ 140.34 ಕೋಟಿ ಆದಾಯ ಬಂದಿರುವುದು ಗಮನಾರ್ಹ. ಮತ್ತೊಂದೆಡೆ, ಇದೇ 27ರಿಂದ ಶ್ರೀವಾರಿಯ ವಾರ್ಷಿಕ ಬ್ರಹ್ಮೋತ್ಸವಕ್ಕೆ ಟಿಡಿಪಿ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಈ ತಿಂಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಾಗಿರುವುದರಿಂದ ಶ್ರೀವಾರಿ ಹುಂಡಿಯ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.