ಹೊಸ ದಿಗಂತ ವರದಿ , ಬಳ್ಳಾರಿ:
ಎಸ್ಟಿ ಸಮುದಾಯದವರಿಗೆ ಶೇ.7.5 ಹಾಗೂ ಎಸ್ಸಿ ಸಮುದಾಯದವರಿಗೆ ಶೇ.17ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ನಮ್ಮ ಬಿಜೆಪಿ ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬು.ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಎಸ್ಟಿ ವರ್ಗದವರಿಗೆ ಶೇ.3 ರಿಂದ 7.5 ರಷ್ಟು ಮಿಸಲಾತಿ ಕಲ್ಪಿಸಬೇಕು, ಎಸ್ಸಿ ವರ್ಗದವರಿಗೆ ಶೇ.15ರಿಂದ 17 ರಷ್ಟು ಮೀಸಲಾತಿ ಹೆಚ್ಚಳ ಮಾಡಬೇಕು ಎನ್ನುವ ಬೇಡಿಕೆಗೆ ನಮ್ಮ ರಾಜ್ಯ ಬಿಜೆಪಿ ಸರ್ಕಾರ ಸ್ಪಂದಿಸಿ ಇತಿಹಾಸ ಸೃಷ್ಟಿಸಿದೆ. ಅದರಂತೆ ನಾಡುನ ಜನತೆಗೆ ಕೊಟ್ಟ ಮಾತಿನಂತೆ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಅವರು ನಡೆದುಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ನವರಂತೆ ಸುಳ್ಳು ಹೇಳುವ ಸಂಪ್ರದಾಯ ನಮ್ಮಲ್ಲಿಲ್ಲ, ದಿಢೀರ್ ನೇ ತೀರ್ಮಾನ ಕೈಗೊಂಡು ಅರ್ಧಕ್ಕೆ ಮೊಟಕುಗೊಳಿಸುವ ಪಕ್ಷ ನಮ್ಮದಲ್ಲ, ಜನರ ಹಿತದೃಷ್ಟಿಯಿಂದ ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ಮಾಡಿ ನೀಡಿದ ಮಾತಿನಂತೆ ನಡೆದುಕೊಳ್ಳುವ ಸರ್ಕಾರ ನಮ್ಮದು, ಪ್ರಧಾನಿ ಮೋದಿಜೀ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಜೀ, ಸಾರಿಗೆ ಸಚಿವ ಬಿ.ಶ್ರಿರಾಮುಲು ಸೇರಿದಂತೆ ಸಂಪುಟದ ಎಲ್ಲ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುವೆ. ವಿಶೇಷವಾಗಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರ ಶ್ರಮ, ಹೋರಾಟಕ್ಕೆ ಚಿರಋಣಿಯಾಗಿರುವೆ, ಅವರಿಗೆ ಕೋಟಿ ಕೋಟಿ ನಮಸ್ಕಾರಗಳನ್ನು ಸಲ್ಲಿಸುವೆ ಎಂದರು.
ಶೇ.7.5ರಷ್ಟು ಎಸ್ಟಿ ಮಿಸಲಾತಿ ಹೆಚ್ಚಳ ಮಾಡಿದರೇ ನಾವು ಬಿಜೆಪಿ ಬೆಂಬಲಿಸುತ್ತೇವೆ ಎಂದು ಕಾಂಗ್ರೆಸ್ ನವರು ಹೇಳಿದ್ದರು. ಅದರಂತೆ ನಡೆದುಕೊಳ್ಳಬೇಕು, ಕೊಟ್ಟ ಮಾತನ್ನು ನಮ್ಮ ಸರ್ಕಾರ, ಸಚಿವ ಶ್ರಿರಾಮುಲು ಅವರು ಈಡೇರಿಸಿದ್ದಾರೆ. ಎಸ್ಸಿ, ಎಸ್ಟಿ ಸಮುದಾಯದವರಿಗೆ ನಮ್ಮ ಬಿಜೆಪಿ ಸರ್ಕಾರ ಬಹುದೊಡ್ಡ ಕೊಡುಗೆ ನೀಡಿದೆ. ಪ್ರತಿಯೋಬ್ಬರೂ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ, ಮತ್ತೋಮ್ಮೆ ಮೋದಿಜೀ ಅವರನ್ನು ಪ್ರಧಾನ ಮಂತ್ರಿಯನ್ನಾಗಿ ಮಾಡಬೇಕು, ರಾಜ್ಯದಲ್ಲಿ ಮತ್ತೋಮ್ಮೆ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಬೇಕು ಎಂದು ಮನವಿ ಮಾಡಿದರು.
ಎಸ್ಟಿ ಹಾಗೂ ಎಸ್ಸಿ ವರ್ಗದವರಿಗೆ ಮಿಸಲಾತಿ ಹೆಚ್ಚಳ ಮಾಡಿದ್ದು, ನಮ್ಮ ಬಿಜೆಪಿ ಸರ್ಕಾರ, ಸರ್ಕಾರದ ವತಿಯಿಂದ ಮಹರ್ಷಿ ವಾಲ್ಮಿಕಿ ಜಯಂತ್ತ್ಯುತ್ಸವ ವನ್ನು ಆಚರಣೆ ಮಾಡಿದ್ದು ನಮ್ಮಬಿಜೆಪಿ ಸರ್ಕಾರ, ಶ್ರೀ ಕನಕ ಜಯಂತ್ತ್ಯುತ್ಸವ ವನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ ಎಂಬುದನ್ನು ಯಾರೂ ಮರೆಯಬಾರದು, ರಾಜ್ಯದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯಲ್ಲ, ಅದು ಭಾರತ್ ಛೋಡೋ ಯಾತ್ರೆ ಆಗಿದೆ. ದೇಶದಲ್ಲೇ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ, ರಾಜ್ಯದಲ್ಲಿ ಸ್ವಲ್ಪ ಜೀವ ಹಿಡಿದಿದ್ದು, ಅದೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ತಿಳಿಸಿದರು.