ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಎಎಸ್ ಅಧಿಕಾರಿಯೊಬ್ಬ ತನ್ನ ನಾಯಿಯೊಂದಿಗೆ ವಾಕ್ ಮಾಡಲೆಂದು ಇಡೀ ಸ್ಟೇಡಿಯಂಅನ್ನು ಖಾಲಿಗೊಳಿಸುತ್ತಿರುವ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ತರಬೇತಿಯಲ್ಲಿ ತೊಡಗಿರುವ ಅನೇಕ ಕ್ರೀಡಾಪಟುಗಳನ್ನು ಸಮಯಕ್ಕಿಂತ ಮೊದಲೇ ಹೊರಕ್ಕೆ ಕಳಿಸಲಾಗುತ್ತಿದೆ. ಅವರನ್ನು ಹೊರ ಹಾಕಿದ ನಂತರ ದೆಹಲಿಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜೀವ್ ಕುಮಾರ್ ತಮ್ಮ ನಾಯಿಯೊಂದಿಗೆ ಸ್ಟೇಡಿಯಂ ನಲ್ಲಿ ವಾಕ್ ಮಾಡುತ್ತಿದ್ದಾರೆ ಎಂದು ಕ್ರೀಡಾಪಟುಗಳು ದೂರಿದ್ದಾರೆ.
“ನಾವು ಮೊದಲು 8.30ರ ವರೆಗೂ ತರಬೇತಿ ಮಾಡುತ್ತಿದ್ದೆವು. ಆದರೆ ಕಳೆದ ಕೆಲವು ತಿಂಗಳುಗಳಿಂದ ನಮ್ಮನ್ನು ಸಮಯ್ಕಿಂತ ಮುಂಚೆಯೇ ಹೊರಕ್ಕೆ ಹೋಗುವಂತೆ ಒತ್ತಾಯ ಮಾಡುತ್ತಿದ್ದಾರೆ. 7 ಗಂಟೆಗೆ ನಮ್ಮನ್ನು ಹೊರಹಾಕುತ್ತಿದ್ದಾರೆ” ಎಂದು ಕ್ರೀಡಾಪಟುಗಳು ಮತ್ತು ತರಬೇತುದಾರರು ದೂರಿದ್ದಾರೆ. ಈ ಕುರಿತು ಅಧಿಕಾರಿಯನ್ನು ಪ್ರಶ್ನಿಸಿದಾಗ “ಈ ಆರೋಪ ಸಂಪೂರ್ಣವಾಗಿ ತಪ್ಪು” ಎಂದಿರುವ ಅವರು ಕೆಲವೊಮ್ಮೆ ನಾಯಿಯೊಂದಿಗೆ ವಾಕ್ ಮಾಡಲು ತೆರಳಿರುವುದು ಹೌದು ಎಂದು ಒಪ್ಪಿಕೊಂಡಿದ್ದಾರೆ. ಆದರೆ ಇದರಿಂದ ಕ್ರೀಡಾಪಟುಗಳಿಗೆ ತೊಂದರೆಯಾಗುತ್ತಿದೆ ಎಂಬುದನ್ನು ತಳ್ಳಿಹಾಕಿದ್ದಾರೆ.
ಈ ಕುರಿತು ಇಂಡಿಯನ್ ಎಕ್ಸ್ ಪ್ರೆಸ್ ತಂಡವು ಮೂರುದಿನಗಳ ಕಾಲ ಸ್ಟೇಡಿಯಂಗೆ ತೆರಳಿ ಪರಿಶೀಲಿಸಿದ್ದು 6.30ರಿಂದ 7 ಗಂಟೆಗೇ ಕ್ರೀಡಾಳುಗಳನ್ನು ಹೊರಹಾಕುತ್ತಿರುವುದು ಕಂಡು ಬಂದಿದೆ ಅಲ್ಲದೇ ಒಂದುದಿನ ಅಧಿಕಾರಿ ತನ್ನ ನಾಯಿಯೊಂದಿಗೆ ಅಲ್ಲಿ ವಾಕ್ ಮಾಡುತ್ತಿರುವುದು ಕಂಡುಬಂದಿದೆ.
2010 ರ ಕಾಮನ್ವೆಲ್ತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾದ ಕೇಂದ್ರೀಯ ಕ್ರೀಡಾ ಸಂಕೀರ್ಣವು ಬಹು-ಶಿಸ್ತಿನ ಸೌಲಭ್ಯವಾಗಿದ್ದು ಅದು ರಾಷ್ಟ್ರೀಯ ಮತ್ತು ರಾಜ್ಯ ಕ್ರೀಡಾಪಟುಗಳು ಮತ್ತು ಫುಟ್ಬಾಲ್ ಆಟಗಾರರನ್ನು ಆಕರ್ಷಿಸುತ್ತದೆ. ಆದರೆ ಅಧಿಕಾರಿಯೊಬ್ಬರ ಸಲುವಾಗಿ ನೂರಾರು ಕ್ರೀಡಾಪಟುಗಳಿಗೆ ಅನ್ಯಾಯ ಮಾಡುವುದು ಎಷ್ಟು ಸರಿ ಎಂದು ಜನಸಾಮಾನ್ಯ ಪ್ರಶ್ನಿಸಿದ್ದಾನೆ.