ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ಸಮಯ ಬಾಕಿ ಇದ್ದು, ರಾಜ್ಯ ಸರ್ಕಾರ ನೂತನ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ತಲಾ ಎರಡರಂತೆ 12 ಸಾವಿರ ವಿವೇಕಾನಂದ ಸ್ವಸಹಾಯ ಗುಂಪುಗಳನ್ನು ರಚಿಸಲು ಸರ್ಕಾರ ಆದೇಶ ನೀಡಿದೆ.
ಯುವಮತದಾರರನ್ನು ಸೆಳೆಯುವ ತಂತ್ರ ಇದಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ. ಈ ಬಾರಿ ಸುಮಾರು ಏಳು ಲಕ್ಷಕ್ಕೂ ಅಧಿಕ ಮಂದಿ ಮೊದಲ ಬಾರಿಗೆ ಮತ ಚಲಾಯಿಸುವವರು ನೋಂದಣಿಯಾಗಿದ್ದಾರೆ. ಇಂತಹ ಮತದಾರರನ್ನು ಸೆಳೆಯುವ ಪ್ರಯತ್ನ ಇದಾಗಿದೆ.
ರಾಜಕೀಯ ಪಕ್ಷಗಳು ಈ ವಿಭಾಗದ ಮತದಾರರನ್ನು ಸೆಳೆಯಲು ನೂತನ ಪ್ರಯತ್ನ ಮಾಡುತ್ತಿದೆ. ಕರ್ನಾಟಕದಲ್ಲಿ ಒಟ್ಟು ಆರು ಸಾವಿರ ಗ್ರಾಮ ಪಂಚಾಯಿತಿಗಳಿವೆ. ಈ ಹಿಂದೆ ಪ್ರತಿ ಪಂಚಾಯತ್ಗೆ ಒಂದು ವಿವೇಕಾನಂದ ಸ್ವಸಹಾಯ ಸಂಘ ರಚಿಸಲು ಪ್ರಸ್ತಾಪಿಸಲಾಗಿತ್ತು. ಇದೀಗ ಪ್ರತಿ ಪಂಚಾಯಿತಿಯಲ್ಲಿ ಎರಡು ಗುಂಪುಗಳನ್ನು ಹೊಂದಲು ಹಣಕಾಸು ಇಲಾಖೆ ಅನುಮತಿ ನೀಡಿದ್ದು, ರಾಜ್ಯದಲ್ಲಿ ಒಟ್ಟಾರೆ 12 ಸಾವಿರ ಗುಂಪುಗಳಾಗಿವೆ.
ಈ ಯೋಜನೆಯ ಪ್ರಮುಖ ಉದ್ದೇಶ ಯುವ ಪೀಳಿಗೆಗೆ ಉದ್ಯೋಗ ನೀಡುವುದಾಗಿದೆ. ಒಂದು ಲಕ್ಷ ರೂಪಾಯಿ ಸಹಾಯಧನ, 10 ಸಾವಿರ ರೂಪಾಯಿ ನಗದು ಹಾಗೂ ಐದು ಲಕ್ಷ ರೂಪಾಯಿ ಸಾಲವನ್ನು ನೀಡಲಾಗುತ್ತದೆ.
ರಾಜ್ಯದ ಶೇ.60 ರಷ್ಟು ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದೆ, ಅಲ್ಲಿನ ಯುವಕರು ಉದ್ಯೋಗ ಅರಸಿ ಸಿಟಿಗಳಿಗೆ ಬರುತ್ತಾರೆ. ಆದರೆ ಈ ಯೋಜನೆಯಿಂದ ಯುವಕರು ತಮ್ಮ ಸ್ಥಳಗಳಲ್ಲಿಯೇ ಉದ್ಯೋಗ ಪಡೆಯುವಂತಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.