ಹೊಸದಿಗಂತ ವರದಿ ಮಡಿಕೇರಿ:
ಕೊಡಗಿಗೆ ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದ ಸರ್ಕಾರಗಳು 4500 ಕೋಟಿ ರೂ. ಅನುದಾನ ನೀಡಿದ್ದು, ಇದು ಕೊಡಗಿನ ಚರಿತ್ರಾರ್ಹ ದಾಖಲೆಯಾಗಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹೇಳಿದರು.
ಬಿಜೆಪಿ ವತಿಯಿಂದ ಗೋಣಿಕೊಪ್ಪದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಮೂಲಕ ಕೊಡಗಿಗೆ ಕೇಂದ್ರದಿಂದ 1,500 ಕೋಟಿ ರೂ.ಅನುದಾನ ಬಂದಿದೆ. ವೀರಾಜಪೇಟೆ ಕ್ಷೇತ್ರದಲ್ಲಿ ಬೋಪಯ್ಯ ಅತ್ಯಧಿಕ ಅಭಿವೃದ್ದಿ ಕೈಗೊಂಡು ಜನಪರವಾಗಿದ್ದಾರೆ ಎಂದು ಶ್ಲಾಘಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವನ್ನು ಭರವಸೆ ನೀಡಿದಂತೆ ನಿಮಿ೯ಸಿದ್ದೇವೆ. ಇದು ಬಿಜೆಪಿಯ ಕಾರ್ಯತ್ಪರತೆಗೆ ಸಾಕ್ಷಿಯಾಗಿದೆ. ಕಾಶ್ಮೀರದಿಂದ ಆಟಿ೯ಕಲ್ 370 ಅನ್ನು ತೆಗೆದು ಹಾಕಿದ ಕೀರ್ತಿಯೂ ಮೋದಿಯವರದ್ದು ಎಂದು ರಂಜನ್ ನುಡಿದರು.
ಜಿಲ್ಲೆಗೆ 138 ಕೋಟಿ ರು. ಪರಿಹಾರದ ಮೊತ್ತ ತಲುಪಿದೆ. ಇದು ಬಿಜೆಪಿಯು ಕೊಡಗಿನ ರೈತರಿಗೆ ನೀಡಿದ ಕೊಡುಗೆಯಾಗಿದೆ. ಬಿಜೆಪಿ ಕೊಡಗಿನ ಕೖಷಿಕರಿಗೆ ಮಳೆಯಿಂದ ಉಂಟಾದ ಹಾನಿಯಿಂದಾದ ಸಂಕಷ್ಟದ ಕಣ್ಣೀರನ್ನು ತೊಡೆದುಹಾಕಿದೆ ಎಂದು ಹೇಳಿದರು.
ಇದೇ ಪ್ರಥಮ ಬಾರಿಗೆ ಗೋಣಿಕೊಪ್ಪಲುವಿನಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದಾರೆ. ಬಿಜೆಪಿ ಮೇಲಿನ ವಿರಾಜಪೇಟೆ ಕ್ಷೇತ್ರದ ಜನರ ನಂಬಿಕೆಗೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದ ಅವರು, ಬಿಜೆಪಿ ಕಾರ್ಯಕರ್ತರ ಶ್ರಮ ಸ್ಮರಣೀಯವಾದುದು. ಚುನಾವಣೆ ಸನಿಹದಲ್ಲಿದ್ದು, ಕಾರ್ಯಕರ್ತರು ಮೈಮರೆಯದೇ ಪ್ರತೀ ಮತದಾರರ ಮನೆಗೆ ತಲುಪಿ ಬಿಜೆಪಿ ಸರ್ಕಾರದ ಸಾಧನೆಯನ್ನು ತಿಳಿಸಬೇಕು ಎಂದು ರಂಜನ್ ಕರೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಅವರು, ದಸರಾ ನಂತರ ಗೋಣಿಕೊಪ್ಪಲುವಿನಲ್ಲಿ ಇಷ್ಟೊಂದು ಜನ ಸೇರಿರುವುದು ಮುಂದಿನ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ದಿಕ್ಸೂಚಿಯಾಗಿದೆ. ಕೊಡಗಿನ ಎರಡೂ ಕ್ಷೇತ್ರದಲ್ಲಿ ಮತ್ತೊಮ್ಮೆ ಗೆಲವು ಖಂಡಿತಾ. ಕಳೆದ ಬಾರಿಗಿಂತ ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಬಿಜೆಪಿ ಗೆಲವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು.