ಹೊಸದಿಗಂತ ವರದಿ, ಕುಶಾಲನಗರ:
ಸಮೀಪದ ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಎತ್ತಿನ ಗಾಡಿ ಓಟ ಸ್ಪರ್ಧೆ ನಡೆಸಲಾಯಿತು.
ಈ ಗಾಡಿ ಓಟದ ಸ್ಪರ್ಧೆಯಲ್ಲಿ ಹೆಬ್ಬಾಲೆ ಸುತ್ತಮುತ್ತಲಿನ ಜನರು ಮಾತ್ರವಲ್ಲದೆ, ಮೈಸೂರು, ಚಿಕ್ಕಮಗಳೂರು, ಮಂಡ್ಯ ಹಾಗೂ ಹಾಸನ ಜಿಲ್ಲೆಗಳ ಜನತೆಯೂ ಭಾಗವಹಿಸಿದ್ದು ವಿಶೇಷವೆನಿಸಿತ್ತು.
ಗ್ರಾಮದ ಮಾದರಿ ಯುವಕ ಸಂಘದ ಆಶ್ರಯದಲ್ಲಿ ನಡೆದ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 24 ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲಕರು ಪಾಲ್ಗೊಂಡಿದ್ದರು.
ಎತ್ತಿನ ಗಾಡಿ ಓಟವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಸಲಾಯಿತು.
ದಿನವಿಡೀ ನಡೆದ ಕ್ರೀಡಾಕೂಟದಲ್ಲಿ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದುದು ಕಂಡುಬಂದಿತು. ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ ಉದ್ಘಾಟಿಸಿದರು. ಗ್ರಾಮೀಣ ಕ್ರೀಡಾಕೂಟಗಳಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಎಚ್.ಎಸ್.ಮಂಜುನಾಥ್ ಚಾಲನೆ ನೀಡಿದರು.
ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಕರುಂಬಯ್ಯ, ಭೋಜೇಗೌಡ, ಎಚ್.ಡಿ.ಲೋಹಿತ್ ಕುಮಾರ್ ಕಾರ್ಯನಿರ್ವಹಿಸಿದರು.
ಈ ಸಂದರ್ಭ ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಎಸ್.ಮಧುಸೂದನ್, ಗೌರವ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್, ಉಪಾಧ್ಯಕ್ಷ ಎಚ್.ಆರ್.ರವಿ, ಕಾರ್ಯದರ್ಶಿ ಎಚ್.ಎಂ.ತಿಮ್ಮಪ್ಪ, ಖಜಾಂಚಿ ಎಚ್.ಎಸ್.ರಘು,ಸಂಘಟನಾ ಕಾರ್ಯದರ್ಶಿ ತನುಕುಮಾರ್, ನಿರ್ದೇಶಕರಾದ ಶಮಂತ್, ಗಣೇಶ್, ಆದರ್ಶ, ಶ್ಯಾಮು, ಜಗದೀಶ್ ಪಟೇಲ್, ತ್ರಿನೇಶ್, ಮಣಿಕಂಠ, ದಿಲೀಪ್, ಸಲಹೆಗಾರರಾದ ಎಚ್.ಎಸ್.ಮಂಜುನಾಥ್, ಆರ್.ಆರ್.ಕುಮಾರ್, ನಿವೃತ್ತ ಸೈನಿಕ ಪುಟ್ಟೇಗೌಡ, ಚಂದ್ರಶೇಖರ್, ಎಚ್.ಈ.ಜಗದೀಶ್, ಪ್ರದೀಪ್ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ