ಹೊಸದಿಗಂತ ವರದಿ ನಾಪೋಕ್ಲು:
ಗ್ರಾಮೀಣ ಭಾಗದಲ್ಲಿ ಕ್ಯಾಟರ್ ಬಿಲ್ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಕ್ರೀಡೆಗೆ ಮತ್ತೆ ಜೀವ ತುಂಬುವ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ ಎಂದು ಶಾಸಕ ಕೆ ಜಿ ಬೋಪಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯ ನಾಪೋಕ್ಲು ಸಮೀಪದ ಕಕ್ಕಬೆಯ ಪ್ರೌಢಶಾಲಾ ಮೈದಾನದಲ್ಲಿ ಸ್ಟೆಪ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾದ ರಾಜ್ಯ ಮಟ್ಟದ ಕ್ಯಾಟರ್ ಬಿಲ್ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೊಡಗು ಕ್ರೀಡೆಯ ತವರೂರು. ಕ್ರೀಡೆ ಇಲ್ಲಿನ ಜನರ ಸಂಸ್ಕೃತಿಯಾಗಿದ್ದು ಗ್ರಾಮೀಣ ಕ್ರೀಡೆಯೊಂದಕ್ಕೆ ಹೊಸತನ ನೀಡುವ ಕೆಲಸವನ್ನು ಸ್ಟೆಪ್ಸ್ ಸಂಸ್ಥೆ ಮಾಡಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ರಾಜ್ಯದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸಿರುವುದು ಸಂತಸದ ವಿಷಯ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ ಮಾತನಾಡಿ, ಕ್ಯಾಟರ್ ಬಿಲ್ ಸ್ಪರ್ಧೆಯ ಮೂಲಕ ಉತ್ತಮ ಗುರಿ ಸಾಧಿಸಲು ಸಾಧ್ಯ ಕೊಡಗಿನಲ್ಲಿ ಹಾಕಿ ಉತ್ಸವ ಆರಂಭಗೊಂಡ ಬಳಿಕ ವಿವಿಧ ಗ್ರಾಮೀಣ ಕ್ರೀಡೆಗಳು ಕ್ರೀಡಾಸಕ್ತರಿಗೆ ರಸದೌತಣ ನೀಡುತ್ತಿವೆ. ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಸೌಹಾರ್ದತೆಯನ್ನು ಮೆರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕಿಡ್ನಿ ದಾನ ಮಾಡಿದ ಕಲಿಯಂಡ ಮಿಲನ ಮಂದಣ್ಣ ಅವರನ್ನು ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿದರು.
ರಾಜ್ಯಮಟ್ಟದ ಮುಕ್ತ ಸ್ಪರ್ಧೆಯಲ್ಲಿ 18 ವರ್ಷದ ಒಳಗಿನ ಒಂದು ವಿಭಾಗ ಹಾಗೂ 18 ವರ್ಷ ಮೇಲ್ಪಟ್ಟವರ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ನಡೆಯಿತು.