ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ನಾಗ ಚೈತನ್ಯ ಮತ್ತು ನಟಿ ಸಮಂತಾ ರುತ್ ಪ್ರಭು ಅವರ ವಿಚ್ಛೇದನ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ತೆಲಂಗಾಣ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಕೊಂಡ ಸುರೇಖಾ ವಿರುದ್ಧ ನಟ ನಾಗಾರ್ಜುನ್ ಅವರು ಗುರುವಾರ ದೂರು ದಾಖಲಿಸಿದ್ದಾರೆ.
ನಟ ಅಕ್ಕಿನೇನಿ ನಾಗಾರ್ಜುನ, ಸಚಿವೆ ಕೊಂಡ ಸುರೇಖಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ನಾಮಪಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಕೊಂಡ ಸುರೇಖಾ ವಿರುದ್ಧ ದೂರು ದಾಖಲಿಸಿರುವ ನಾಗಾರ್ಜುನ, ಸಚಿವೆ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ನ್ಯಾಯಾಲಯವನ್ನು ಮನವಿ ಮಾಡಿದ್ದಾರೆ.
ಅರ್ಜಿಯ ವಿಚಾರಣೆ ಶೀಘ್ರವೇ ನಡೆಯಲಿದೆ. ದೂರು ದಾಖಲಿಸಿರುವ ಪ್ರತಿಯನ್ನು ನಾಗಾರ್ಜುನ ಎರಡನೇ ಪುತ್ರ ಅಕ್ಕಿನೇನಿ ಅಖಿಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸಮಂತಾ, ನಾಗ ಚೈತನ್ಯ, ನಾಗಾರ್ಜುನ ಬಗ್ಗೆ ಕೊಂಡ ಸುರೇಖಾ ನೀಡಿರುವ ಈ ನೀಚ ಹೇಳಿಕೆಯನ್ನು ಅಕ್ಕಿನೇನಿ ಕುಟುಂಬ ಸದಸ್ಯರೆಲ್ಲರೂ ತೀವ್ರವಾಗಿ ಖಂಡಿಸಿದ್ದಾರೆ. ಸಾಮಾಜಿಕ ಜಾಲತಾಣದಿಂದ ಬಹುತೇಕ ದೂರವೇ ಇರುವ ನಾಗಾರ್ಜುನ ಪತ್ನಿ ಅಮಲಾ ಸಹ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ‘ಮಹಿಳೆಯೊಬ್ಬಳು-ರಾಕ್ಷಸಿಯಾಗಿ ಬದಲಾಗಿದ್ದನ್ನು ನೋಡಿದೆ’ ಎಂದು ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ . ಅಲ್ಲದೆ ಕೊಂಡ ಸುರೇಖಾ ಅವರನ್ನು ಪಕ್ಷದಿಂದ ಕಿತ್ತುಹಾಕುವಂತೆ ರಾಹುಲ್ ಗಾಂಧಿಯನ್ನು ಒತ್ತಾಯಿಸಿದ್ದಾರೆ.