ಹೊಸದಿಗಂತ ವರದಿ,ಮಡಿಕೇರಿ:
ಅನಾರೋಗ್ಯದಿಂದಾಗಿ ಮೃತಪಟ್ಟಿದ್ದ ವ್ಯಕ್ತಿಯೊಬ್ಬರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ದಾಳಿ ಮಾಡಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಅಬ್ಬೂರುಕಟ್ಟೆ ಗ್ರಾ.ಪಂ ವ್ಯಾಪ್ತಿಯ ಹಳೇ ಮದಲಾಪುರ (ಕಾಟಿಕೊಪ್ಪಲು) ಹಾಡಿಯಲ್ಲಿ ನಡೆದಿದೆ.
ಹಾಡಿಯ ನಿವಾಸಿ ಗೋವಿಂದ (48) ಮೃತ ದುರ್ದೈವಿ. ಮೃತಪಟ್ಟಿದ್ದ ಹಾಡಿಯ ಕುಮಾರ ಎಂಬವರ ಅಂತ್ಯಕ್ರಿಯೆಗೆ ತೆರಳಿದ ಸಂದರ್ಭ ಹೆಜ್ಜೇನು ಹುಳುಗಳು ಸ್ಥಳದಲ್ಲೇ ಇದ್ದ ಗೋವಿಂದ ಎಂಬವರ ಮೇಲೆ ದಾಳಿ ನಡೆಸಿರುವುದರಿಂದ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಂತ್ಯಕ್ರಿಯಲ್ಲಿ ಭಾಗಿಯಾಗಿದ್ದವರು ಹೆಜ್ಜೇನು ದಾಳಿ ಕಂಡು ಶವವನ್ನು ಸ್ಥಳದಲ್ಲೇ ಬಿಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಹೆಜ್ಜೇನು ದಾಳಿಗೆ ಒಳಗಾಗಿ ಗಾಯಗೊಂಡ ಮುತ್ತಪ್ಪ, ಪಾರ್ವತಿ, ಅಣ್ಣಯ್ಯ, ಪರಣಪ್ಪ,, ನಾಗಣ್ಣ, ಗೌಡ ಈ ಆರು ಮಂದಿಯನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.