ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು-ಕಣ್ಣೂರು ನಡುವೆ ಸಂಚರಿಸುವ ಮೆಮು ಎಕ್ಸ್ಪ್ರೆಸ್, ಅದೇ ದಾರಿಯಲ್ಲಿ ಬಂದ ಮಂಗಳೂರು -ತಿರುವನಂತಪುರ ಮಾವೇಲಿ ಎಕ್ಸ್ಪ್ರೆಸ್ ರೈಲಿನ ಮೇಲೆ ಕಾಸರಗೋಡು ಸಮೀಪದ ಎರಿಯಾಲ್ ಹಾಗೂ ಚೇರಂಗೈ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಕಲ್ಲು ತೂರಾಟ ನಡೆದಿದೆ.
ರೈಲು ಹಳಿ ಮೇಲೆ ಕಲ್ಲುಗಳನ್ನಿರಿಸಿ ವಿಧ್ವಂಸಕ ಕೃತ್ಯ ನಡೆಸಿದ ಘಟನೆ ಬೆಳಕಿಗೆ ಬಂದ ಬೆನ್ನಿಗೇ ನಡೆದಿರುವ ಈ ಬೆಳವಣಿಗೆ ಹೊಸ ಆತಂಕಕ್ಕೆ ಕಾರಣವಾಗಿದೆ.
ಕಲ್ಲುತೂರಾಟ ಘಟನೆಯಲ್ಲಿ ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರೈಲ್ವೆ ಪೊಲೀಸರು ಧಾವಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಉಪ್ಪಳ ಸಮೀಪದ ಮುಟ್ಟಂ, ಕಾಸರಗೋಡು ಕೋಟಿಕುಳಂ, ಕಣ್ಣೂರು ಜಿಲ್ಲೆಯ ಪಾಪಿನಶ್ಯೇರಿ ಮೊದಲಾದೆಡೆ ಹಳಿಯಲ್ಲಿ ಕಗ್ಗಲ್ಲು ಇರಿಸಿ ದುಷ್ಕೃತ್ಯ ನಡೆಸಲು ಯತ್ನಿಸಿದ ಘಟನೆ ಇಲ್ಲಿ ನೆನಪಿಸಿಕೊಳ್ಳಬಹುದು.