ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಳ್ಳಾರಿ ಉತ್ಸವ ಹಾಗು (Bellary)ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Raj Kumar) ಪುತ್ಥಳಿ ಅನಾವರಣ ವೇಳೆ ಗಾಯಕಿ ಮಂಗ್ಲಿ (Mangli) ಕಾರಿನ ಮೇಲೆ ಕಲ್ಲು ತೂರಲಾಗಿದೆ ಎನ್ನುವ ಸುದ್ದಿ ಹರಡಿತ್ತು. ಇದೀಗ ಈ ಕುರಿತು ಸ್ವತಃ ಮಂಗ್ಲಿ ಸ್ಪಷ್ಟನೇ ನೀಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ನನ್ನ ಕಾರಿನ ಮೇಲೆ ಕಲ್ಲು ತೂರಾಟ ಮಾಡಲಾಗಿದೆ ಎನ್ನುವುದು ಸಂಪೂರ್ಣ ಸುಳ್ಳು. ಅದೊಂದು ಗಾಳಿಸುದ್ದಿ. ಆ ರೀತಿಯ ಘಟನೆ ಆಗಿಲ್ಲ. ನನ್ನ ಇಮೇಜ್ ಹಾಳು ಮಾಡಲು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ.
ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಪೊಲೀಸ್ ಇಲಾಖೆ ನನ್ನನ್ನು ಗೌರವಯುತವಾಗಿ ನೋಡಿಕೊಂಡಿದೆ. ಲಾಠಿಚಾರ್ಜ್ ಕೂಡ ಆಗಿಲ್ಲ. ಈ ರೀತಿಯ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ’ ಎಂದು ಅವರು ಹೇಳಿದ್ದಾರೆ.
ಕಾರಿನ ಗಾಜು ಒಡೆದಿರುವುದಕ್ಕೆ ಬಳ್ಳಾರಿ ಎಸ್ಪಿ ರಂಜಿತಕುಮಾರ್ ಬಂಡಾರ (Ranjith Kumar Bandara) ಸ್ಪಷ್ಟನೆ ನೀಡಿದ್ದು, ‘ಕಾರಿನ ಮೇಲೆ ಯಾವುದೋ ಒಂದು ವಸ್ತು ಬಿದ್ದಿರುವ ಕಾರಣಕ್ಕಾಗಿ ಗಾಜು ಒಡೆದಿದೆ. ಅವರ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎನ್ನುವುದು ಸುಳ್ಳು. ಆ ರೀತಿಯ ಘಟನೆ ಆಗಿಲ್ಲ ಎಂದಿದ್ದಾರೆ.