ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಹುಲ್ ಗಾಂಧಿ ಕೆಲವು ಹಿಂದೆ ನನ್ನ ಹೆಸರು ಸಾವರ್ಕರ್ ಅಲ್ಲ, ಕ್ಷಮೆಯಾಚಿಸುವುದಿಲ್ಲಎಂಬ ಹೇಳಿಕೆ ನೀಡಿದ್ದರು.ಇದೀಗ ಕಾಂಗ್ರೆಸ್ ನಾಯಕನ ಈ ಹೇಳಿಕೆಗೆ ಮಿತ್ರ ಪಕ್ಷ ಉದ್ಧವ್ ಠಾಕ್ರೆ ಕಿಡಿ ಕಾರಿದ್ದಾರೆ.
ನಮ್ಮ ದೇವರನ್ನು ಅವಮಾನಿಸುವುದನ್ನು ನಿಲ್ಲಿಸದಿದ್ದರೆ ಮಹಾರಾಷ್ಟ್ರ ವಿರೋಧ ಪಕ್ಷದ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಈ ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸಲು ನಾವು ಒಟ್ಟಾಗಿದ್ದೇವೆ ಎಂದು ನಾನು ರಾಹುಲ್ ಗಾಂಧಿಗೆ ಹೇಳಲು ಬಯಸುತ್ತೇನೆ. ಆದರೆ ಮೈತ್ರಿಯಲ್ಲಿ ಬಿರುಕುಗಳನ್ನು ಸೃಷ್ಟಿಸುವ ಯಾವುದೇ ಹೇಳಿಕೆಗಳನ್ನು ನೀಡಬೇಡಿ. ಅವರು (ಬಿಜೆಪಿ) ನಿಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಿದ್ದಾರೆ. ನಾವು ಈ ಸಮಯದಲ್ಲಿ ಎಚ್ಚರ ತಪ್ಪಿದ್ರೆ, ನಮ್ಮ ದೇಶವು ಖಂಡಿತವಾಗಿಯೂ ನಿರಂಕುಶಾಧಿಕಾರದತ್ತ ಸಾಗುತ್ತದೆ ಎಂದು ಉದ್ಧವ್ ಠಾಕ್ರೆ ಹೇಳಿದರು.
ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ, ಎನ್ಸಿಪಿ ಜೊತೆಗೆ 2019 ರಲ್ಲಿ ಮಹಾರಾಷ್ಟ್ರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದಾಗಿನಿಂದ ಮೈತ್ರಿಕೂಟದಲ್ಲಿದೆ.
ಕಳೆದ ವರ್ಷ ಭಾರತ್ ಜೋಡೋ ಯಾತ್ರೆ ವೇಳೆಯೂ ವಿನಾಯಕ್ ವೀರ್ ಸಾವರ್ಕರ್ ಅವರನ್ನು ರಾಹುಲ್ ಗಾಂಧಿ ಟೀಕಿಸಿದ್ದು ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಪಕ್ಷದ ನಡುವೆ ಬಿರುಕು ಮೂಡಿಸಿತ್ತು. ಮತ್ತೆ, ಶನಿವಾರ, ರಾಹುಲ್ ಗಾಂಧಿಯವರು ಮೋದಿ ಸರ್ನೇಮ್ ಹೇಳಿಕೆಗಾಗಿ ಕ್ಷಮೆಯಾಚಿಸಲು ನಿರಾಕರಿಸಿದ ಬಗ್ಗೆ ಕೇಳಿದಾಗ ನನ್ನ ಹೆಸರು ಸಾವರ್ಕರ್ ಅಲ್ಲ. ನನ್ನ ಹೆಸರು ಗಾಂಧಿ ಮತ್ತು ಗಾಂಧಿ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದರು.
ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಠಾಕ್ರೆ ಅವರು ಸಾವರ್ಕರ್ ಅವರನ್ನು ತಮ್ಮ ಆರಾದ್ಯ ದೈವ ಎಂದು ಪರಿಗಣಿಸಿದ್ದೇವೆ ಮತ್ತು ಕಾಂಗ್ರೆಸ್ ನಾಯಕರು ಅವರನ್ನು ಅವಮಾನಿಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು. ಸಾವರ್ಕರ್ ಅವರು 14 ವರ್ಷಗಳ ಕಾಲ ಅಂಡಮಾನ್ ಸೆಲ್ಯುಲಾರ್ ಜೈಲಿನಲ್ಲಿ ಊಹಿಸಲಾಗದ ಚಿತ್ರಹಿಂಸೆ ಅನುಭವಿಸಿದರು. ಸಾವರ್ಕರ್ ಅವರ ಅವಮಾನವನ್ನು ನಾವು ಸಹಿಸುವುದಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದರು.
ಶಿವಸೇನೆಯ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲೂ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಲಾಗಿದೆ. ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಅನ್ಯಾಯವಾಗಿದೆ, ಆದರೆ ಸಾವರ್ಕರ್ ಅವರನ್ನು ಅವಮಾನಿಸುವ ಮೂಲಕ ಅವರು ಸತ್ಯದ ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ. ಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಕುಟುಂಬದಲ್ಲಿ ಜನಿಸಿದರು ಮತ್ತು ಅದು ಸತ್ಯ, ಹಾಗೆ ಸಾವರ್ಕರ್ ಕೂಡ ಮತ್ತು ಅವರ ಕುಟುಂಬ ದೇಶಕ್ಕಾಗಿ ದುಡಿದಿದೆ, ಸಾವರ್ಕರ್ ಅವರನ್ನು ಅವಮಾನಿಸುವುದರಿಂದ ರಾಹುಲ್ ಗಾಂಧಿ ಅವರ ಮೇಲಿನ ಸಹಾನುಭೂತಿ ಕಡಿಮೆಯಾಗುತ್ತದೆ ಎಂದು ಸಂಪಾದಕೀಯ ಹೇಳಿದೆ.