ಕಥೆ ಕಟ್ಟಿ ಟಿಪ್ಪು ವೈಭವೀಕರಣ ಮಾಡುವುದನ್ನು ನಿಲ್ಲಿಸಿ: ಪ್ರತಾಪ್ ಸಿಂಹ

ಹೊಸದಿಗಂತ ವರದಿ ಮಡಿಕೇರಿ:

ಕಾಗಕ್ಕ ಗುಬ್ಬಕ್ಕ ಕಥೆ ಕಟ್ಟಿ ಟಿಪ್ಪುವನ್ನು ವೈಭವೀಕರಣ ಮಾಡುವುದನ್ನು ಇನ್ನಾದರೂ ನಿಲ್ಲಿಸಿ ಎಂದು ಕೊಡಗು-ಮೈಸೂರು ಕ್ಷೇತ್ರದ ಸಂಸದ ಪ್ರತಾಪ್ ಅವರು ಟಿಪ್ಪು ಪ್ರೇಮಿಗಳಿಗೆ ಕಿವಿಮಾತು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಲಿ ಯದ್ಧ ಮಾಡಿದ ಉದಾಹರಣೆಯಿದೆ. ಆದರೆ ಟಿಪ್ಪು ಯಾವ ಯುದ್ಧದಲ್ಲಿ ಹೋರಾಡಿದ್ದಾನೆ. ಯಾವ ಹುಲಿ ಜತೆ ಟಿಪ್ಪು ಹೋರಾಟ ಮಾಡಿದ್ದಾನೆ. ಮನುಷ್ಯ ಹುಲಿ ಜತೆ ಹೋರಾಟ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಆಂಗ್ಲೋ ಮೈಸೂರು ಯುದ್ದದಲ್ಲಿ ಟಿಪ್ಪು ಮನೆಯಿಂದ ಹೊರಗಡೆಯೇ ಬರಲಿಲ್ಲ. ಹುಲಿ ಜತೆ ಫೋಸ್ ಕೊಡೋ ಫೋಟೋ ಹಾಕಿ ಟಿಪ್ಪು ವೈಭವೀಕರಣ ಮಾಡಬೇಡಿ.ಕಟ್ಟು ಕಥೆಗಳ ಮೂಲಕ ಟಿಪ್ಪುವನ್ನು ಕನ್ನಡದ ಹೋರಾಟಗಾರ ಎಂದು ಬಿಂಬಿಸುವುದನ್ನು ನಿಲ್ಲಿಸಿ ಎಂದು ನುಡಿದರು.

ಕ್ರೌರ್ಯದ ದ್ಯೋತಕ: ಕನ್ನಡವನ್ನು ಕಗ್ಗೊಲೆ ಮಾಡಿದ ವ್ಯಕ್ತಿಯ ಪ್ರತಿಮೆ ಮಾಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ಸಿದ್ದರಾಮಯ್ಯ ಕನ್ನಡ ಸಂಸ್ಕೖತಿ ಇಲಾಖೆ ಮೂಲಕ ಟಿಪ್ಪು ಜಯಂತಿ ಮಾಡಿಸಿದ್ದರು. ಇದು ಅರಣ್ಯ ಇಲಾಖೆಯು ವೀರಪ್ಪನ್ ಜಯಂತಿ ಮಾಡಿದಂತಾಗುತ್ತದೆ. ಟಿಪ್ಪು ಕ್ರೌರ್ಯಕ್ಕೆ ದ್ಯೋತಕವಾಗಿದ್ದಾನೆ. ಟಿಪ್ಪು ರಾಕೆಟ್ ಹಾರಿಸಲೇ ಇಲ್ಲ. ಯುದ್ದದಲ್ಲಿ ಟಿಪ್ಪು ರಾಕೆಟ್ ಬಳಕೆ ಮಾಡಿದ ಉದಾಹರಣೆಯೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.

ಪ್ರತಿಮೆಗೆ ಅವಕಾಶವಿಲ್ಲ: ಕೊಡವರಿಗೆ ಅಪಮಾನ ಮಾಡಿದ್ದ, ದೇವಾಲಯಗಳ ಮೇಲೆ ದಾಳಿ ಮಾಡಿದ್ದ ಟಿಪ್ಪುವಿನ ಪ್ರತಿಮೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಹೀಗೇ ಬಿಟ್ಟರೆ ಮೈಸೂರನ್ನು ನಜರಾಬಾದ್, ಹಾಸನವನ್ನು ಕೈಮಾಬಾದ್ ಎಂದು ಕರೆಯಲು ಮುಂದಾಗುತ್ತಾರೆ ಎಂದು ಅವರು ಗುಡುಗಿದರು.

ಗುಂಬಜ್ ತೆರವಿಗೆ ಗಡುವು: ಮೈಸೂರಿನ ಬಸ್ ತಂಗುದಾಣದಲ್ಲಿನ ಗುಂಬಜನ್ನು 3-4 ದಿನಗಳಲ್ಲಿ ತೆರವುಗೊಳಿಸುವುದು ನಿಶ್ಚಿತ. ಮೈಸೂರು ಮಹಾನಗರಪಾಲಿಕೆ ಅದನ್ನು ತೆರವುಗೊಳಿಸದೇ ಇದ್ದಲ್ಲಿ ತಾನೇ ತೆರವು ಮಾಡುವೆ ಎಂದು ನುಡಿದ ಅವರು, 16ರಿಂದ 19ನೇ ಶತಮಾನದವರೆಗೆ ಭಾರತದಲ್ಲಿ ಮೊಘಲರ ಆಳ್ವಿಕೆಯಿತ್ತು.ಆಗ ಇಂಡೋ ಸಾರ್ಸೆನಿಕ್ ಶೈಲಿಯ ವಾಸ್ತು ಶೈಲಿ ಭಾರತದಲ್ಲಿತ್ತು ಎಂದು ವಿಶ್ಲೇಷಿಸಿದರು.

ಪರ್ಶಿಯಾ, ಟರ್ಕಿ, ಮೊಘಲರು ಭಾರತದ ಮೇಲೆ ದಾಳಿ ನಡೆಸಿದರು. 19ನೇ ಶತಮಾನದಲ್ಲಿ ಭಾರತ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಆಂಗ್ಲರ ಶೈಲಿಯ ವಾಸ್ತು ಶೈಲಿ ಜಾರಿಗೆ ಬಂತು. ಹೀಗಾಗಿ ದೇಶದ ಅನೇಕ ಕಡೆ ಇಂಡೋ ಸಾರ್ಸೆನಿಕ್ ವಾಸ್ತುಶೈಲಿಯಿಂದ ಸ್ಪೂರ್ತಿ ಪಡೆದಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ವಾಸ್ತು ಶೈಲಿಯ ಕಟ್ಟಡಕ್ಕೂ ಗುಂಬಜ್’ಗಳಿಗೂ ಸಂಬಂಧ ಕಲ್ಪಿಸಬೇಡಿ ಎಂದ ಪ್ರತಾಪ್ ಸಿಂಹ ಅವರು, ಕೂಡಲೇ ಗುಂಬಜ್ ಮಾದರಿಯ ಶೈಲಿಯ ಬಸ್ ತಂಗುದಾಣ ತೆರವುಗೊಳಿಸಿ ಇದು ಪಾರಂಪರಿಕೆ ಶೈಲಿಯ ಸಂಕೇತವಲ್ಲ ಎಂದು ಉದಾಹರಣೆ ಸಹಿತ ವಿವರಿಸಿದರು. ಅಲ್ಲದೆ ವಿವೇಚನಾ ರಹಿತವಾಗಿ ಕೆಲವರು ಹೇಳಿಕೆ ನೀಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!