ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂದೇಶ್ಖಾಲಿ ಘಟನೆ ಕುರಿತು ಬಿಜೆಪಿಯು ಸುಳ್ಳು ಮಾಹಿತಿ ಹಬ್ಬಿಸಿತ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಆರೋಪಿಸಿದ್ದಾರೆ.
ಬಂಗಾಳದ ಬೋಲ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯೇ ಈ ಸಂಚು ರೂಪಿಸಿರುವ ಸಂಗತಿ ಇತ್ತೀಚೆಗೆ ನಡೆದ ಮಾರುವೇಷ ಕಾರ್ಯಾಚರಣೆಯಲ್ಲಿ ಬಹಿರಂಗಗೊಂಡಿದೆ.ಹೀಗಾಗಿ, ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮೊಸಳೆ ಕಣ್ಣೀರು ಸುರಿಸುವುದನ್ನು ನಿಲ್ಲಿಸಬೇಕು ಎಂದು ಟೀಕಿಸಿದ್ದಾರೆ.
ಬಿಜೆಪಿ ನಾಯಕರು ಸುಳ್ಳುಗಳನ್ನು ಸೃಷ್ಟಿಸಿದ್ದು, ಸುಳ್ಳುಗಳನ್ನು ಹಬ್ಬಿಸುವುದಕ್ಕೆ ಕೆಲವರಿಗೆ ಹಣ ನೀಡುವ ಮೂಲಕ ಈ ಪಿತೂರಿ ರೂಪಿಸಿದ್ದಾರೆ.ಬಿಜೆಪಿ ಇಷ್ಟೊಂದು ಕೀಳು ಮಟ್ಟಕ್ಕೆ ಇಳಿಯುತ್ತದೆ ಎಂದು ಯಾರಾದರೂ ಊಹಿಸಿದ್ದಿರಾ’ ಎಂದು ಪ್ರಶ್ನಿಸಿದರು.
ಇಂತಹ ಘೋರ ಆರೋಪಗಳನ್ನು ಮಾಡುವ ಮೂಲಕ ಪಶ್ಚಿಮ ಬಂಗಾಳದ ತಾಯಂದಿರ ಗೌರವಕ್ಕೆ ಧಕ್ಕೆ ತರಬೇಡಿ. ನಮ್ಮ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸುವುದಕ್ಕೆ ರಾಜ್ಯದ ಮಹಿಳೆಯರಿಗೆ ಹಣ ನೀಡುವ ಮೂಲಕ ಅವರಿಗೆ ಅಗೌರವ ತೋರಬೇಡಿ ಎಂದು ಹೇಳಿದರು.