ಹೊಸದಿಗಂತ ವರದಿ, ಕಲಬುರಗಿ:
ಹಿಜಾಬ್ ವಿಚಾರದಲ್ಲಿ ಸುಖಾಸುಮ್ಮನೆ ಗೊಂದಲ ಸೃಷ್ಟಿ ಮಾಡುವವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಿಜಾಬ್ ಸಂಬಂಧ ಯಾರು ಪತ್ರ ಬರೆದಿಲ್ಲ. ಆದರೆ ನಿನ್ನೆಯಷ್ಟೇ ಕೆಲವು ಶಾಸಕರು ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ. ಹೀಗಾಗಿ ಅವರಿಗೆ ಏನು ಮನವರಿಕೆ ಮಾಡಬೇಕೋ ಮಾಡಿದ್ದಿನಿ ಎಂದರು. ಶಾಲೆಗಳು ಅಂದಾಗ ಸಮಾನತೆ ಇರಬೇಕು. ಭವಿಷ್ಯದ ಭಾರತದ ಬಗ್ಗೆ ಯೋಚನೆ ಮಾಡಿದರೆ ಭಯವಾಗುತ್ತದೆ. ಹೀಗಾಗಿ ನಾವು ನೀವು ಸೇರಿ ಈ ಸ್ಥಿತಿಯಿಂದ ಎಲ್ಲರನ್ನೂ ಹೊರ ತರಬೇಕು ಎಂದರು.
ನ್ಯಾಯಾಲಯದ ತೀರ್ಪಿನ ಪ್ರಕಾರ ನಡೆದುಕೊಳ್ಳಬೇಕು. ಸಂವಿಧಾನದ ವಿರುದ್ಧ ಹೋಗುವವರನ್ನು ಖಂಡಿಸಬೇಕು ಎಂದು ಹೇಳಿದರು.
ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಇಲ್ಲ. ಕೆಲವು ಬೆರಳಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ ಈ ಗದ್ದಲವಿದೆ. ಹೀಗಾಗಿ ಅವರಿಗೆ ಎಚ್ಚರಿಕೆ ಕೊಡುವಂತ ಕೆಲಸಗಳು ಆಗುತ್ತಿವೆ. ಅಂತಹ ಕಾಲೇಜುಗಳ ಸುತ್ತ ಮುತ್ತ 144 ಜಾರಿ ಮಾಡಿದ್ದು, ಅದನ್ನು ಮೀರಿ ಗೊಂದಲ ಸೃಷ್ಟಿ ಮಾಡಿದವರು ಅರೆಸ್ಟ್ ಆಗಿದ್ದಾರೆ ಎಂದರು. ಅದರ ಜೊತೆಗೆ ಕೆಲವರ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ ಎಂದರು.