ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಗುರು ದೇವೋಭವʼ ಎಂದು ಗುರುವಿಗೆ ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅದೆಲ್ಲವೂ ಬದಲಾಗಿದೆ. ಶಿಕ್ಷಕರು ಹೊಡೆಯೋದಿರಲಿ, ಬುದ್ದಿ ಮಾತು ಹೇಳುವ ಹಾಗಿಲ್ಲ. ಇಲ್ಲಿ ಆಗಿದ್ದು ಕೂಡ ಅದೇ ರೀತಿ. ಶಾಲೆಗೆ ಪುಸ್ತಕ ತಂದಿಲ್ಲದ ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಶಿಕ್ಷಕನನ್ನೇ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಬೃಂದಾವನದಲ್ಲಿ ನಡೆದಿದೆ.
ಶಾಲೆಗೆ ಪುಸ್ತಕ ತರಲಿಲ್ಲ ಎಂದು 10ನೇ ತರಗತಿ ವಿದ್ಯಾರ್ಥಿಗೆ ಗಣಿತ ಮೇಷ್ಟ್ರು ಬೈದಿದ್ದಾರೆ. ಪುಸ್ತಕವಿಲ್ಲದೆ ತರಗತಿಗೆ ಯಾಕೆ ಬರುತ್ತೀರಾ? ಎಂದು ವಿದ್ಯಾರ್ಥಿಯನ್ನು ಆಚೆ ನಿಂತುಕೊಳ್ಳುವಂತೆ ಶಿಕ್ಷೆ ವಿಧಿಸಿದರು. ವಿದ್ಯಾರ್ಥಿ ಬ್ಯಾಗ್ ತೆಗೆದುಕೊಂಡು ಆಚೆ ಹೋಗುವಾಗ ಮೇಷ್ಟು ಬೆನ್ನಿಗೆ ಒಂದು ಏಟು ಹಾಕಿದ್ದಾರೆ.
ಅಷ್ಟೇ ಆಗಲೇ ಸಿಟ್ಟು ನೆತ್ತಿಗೇರಿದ್ದ ವಿದ್ಯಾರ್ಥಿಗೆ ಏಕಾಏಕಿ ಬಂದು ಶಿಕ್ಷಕನನ್ನು ತಳ್ಳಾಡಿ, ನೂಕಾಡಿ ನೀವು ನನ್ನನ್ನು ಗದರಿಸುತ್ತೀರಾ? ನನಗೇ ಹೊಡೆಯುತ್ತೀರಾ ಎಂದು ಏಕಾಏಕಿ ಶಿಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ. ತರಗತಿಯಲ್ಲಿ ಎಲ್ಲಾ ವಿದ್ಯಾರ್ಥಿಗಳ ಮುಂದೆ ಗಣಿತ ಮೇಷ್ಟ್ರನ್ನು ಹಿಗ್ಗಾಮುಗ್ಗ ಥಳಿಸಿದ್ದಾನೆ. ಇದನ್ನು ಕಂಡ ಉಳಿದ ವಿದ್ಯಾರ್ಥಿಗಳು ತಕ್ಷಣ ಓಡಿ ಬಂದು ಸಹಪಾಠಿಯನ್ನು ಎಳೆದೊಯ್ದರು. ಹಲ್ಲೆ ನಡೆಸಿದ ಹತ್ತನೇ ತರಗತಿ ವಿದ್ಯಾರ್ಥಿಯ ವರ್ತನೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.