ಹೊಸ ದಿಗಂತ ವರದಿ, ತುಮಕೂರು:
ತಿಪಟೂರು ನಗರದಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲಿ ನಿಂತು ಹೊಡೆದಾಡಿಕೊಂಡಿದ್ದಾರೆ.
ತಿಪಟೂರು ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಶುಕ್ರವಾರ 75ನೇ ವರ್ಷದ ಗಣರಾಜ್ಯೋತ್ಸವದ ವೀಕ್ಷಣೆಗೆ ಬಂದಿದ್ದ ವಿದ್ಯಾರ್ಥಿಗಳು ಕಾರ್ಯಕ್ರಮ ಮುಗಿದ ನಂತರ ಯುವತಿಯನ್ನು ಮಾತನಾಡಿಸಿದ ವಿಚಾರದ ನಿಮಿತ್ತ ರಸ್ತೆ ಬದಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಎಲ್ಲರೂ ಶಾಲಾ-ಕಾಲೇಜುಗಳಿಗೆ ಸೇರಿದ ವಿದ್ಯಾರ್ಥಿಗಳಾಗಿದ್ದು ಎರಡು ಗುಂಪುಗಳ ಮಧ್ಯೆ ಹೊಡೆದಾಟ ನಡೆದಿದೆ.
ಸ್ಥಳೀಯರ ಮಾಹಿತಿಯ ಪ್ರಕಾರ ವಿದ್ಯಾರ್ಥಿಗಳು ನೆಹರು ನಗರ, ಇಂದಿರಾ ನಗರ, ಗೊರಗೊಂಡನಹಳ್ಳಿ ಗ್ರಾಮಗಳಿಗೆ ಸೇರಿದ್ದು ವಿಡಿಯೋ ರಾತ್ರಿ ವೇಳೆಗೆ ವೈರಲ್ ಆದ ನಂತರ ತಡ ರಾತ್ರಿಯೇ ವಿದ್ಯಾರ್ಥಿಗಳು, ಪೋಷಕರನ್ನು ಖುದ್ದು ತಿಪಟೂರು ನಗರ ಪೊಲೀಸ್ ಠಾಣೆಗೆ ಕರೆಸಿ ಕ್ಷಮಾಪಣೆಯ ಪತ್ರ ಬರೆಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ತಿಪಟೂರು ನಗರದಲ್ಲಿ ಬೆಳಿಗ್ಗೆ -ಸಂಜೆ ವೇಳೆಯಲ್ಲಿ ಹುಡುಗಿಯರನ್ನು ಹಿಂಬಾಲಿಸಲು ಅನೇಕ ಯುವಕರ ತಂಡಗಳು ಬೈಕ್ನಲ್ಲಿ ಬರುವುದು, ಓಡಾಟ ನಡೆಸುವ ಘಟನೆಗಳು ಹೆಚ್ಚಾಗಿದ್ದು ಪೊಲೀಸರು ಸೂಕ್ತ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.