ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವತಾ ಕಾರ್ಯಗಳಿಗೆ ವಿನಿಯೋಗಿಸಿದ ಸಂಪತ್ತು ಅನುಗ್ರಹರೂಪದಲ್ಲಿ ನಮಗೆ ಬಂದೊದಗುತ್ತದೆ. ಎಲ್ಲವನ್ನೂ ನೀಡಿದ ದೇವರ ಸೇವೆಗೆ ನಾವು ಸದಾ ಬದ್ಧರಿರಬೇಕು. ದೇವತಾರಾಧನೆ ಸದಾ ನಡೆದಾಗ ನಾಡು ಸಂಪದ್ಭರಿತವಾಗುತ್ತದೆ ಎಂದು ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಹೇಳಿದರು.
ಶುಕ್ರವಾರ ಜರಗಿದ ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರೂಪೀಕರಣ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ರಹ್ಮಕಲಶವೆಂಬುದು ದೇವಾಲಯದ ಪ್ರಧಾನ ವಿಚಾರವಾಗಿರುತ್ತದೆ. ಈ ಪುಣ್ಯಕಾರ್ಯವು ನಮ್ಮ ಕಾಲದಲ್ಲಿ ಬಂದೊದಗಿದೆ. ಇದರಲ್ಲಿ ಎಲ್ಲರೂ ಸಕ್ರಿಯರಾಗಿ ತೊಡಗಿಸಿಕೊಳ್ಳುವ ಮೂಲಕ ಕೃತಾರ್ಥರಾಗೋಣ ಎಂದರು.
ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ವಿ.ಬಿ.ಕುಳಮರ್ವ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಆಳ್ವ ಕಳತ್ತೂರು, ಹಿರಿಯರಾದ ವಿ.ಶ್ರೀಕೃಷ್ಣ ಭಟ್ ವಾಶೆಮನೆ ಮಾತನಾಡಿದರು. ಧಾರ್ಮಿಕ ಸಾಮಾಜಿಕ ಮುಂದಾಳು ಜಯದೇವ ಖಂಡಿಗೆ, ಆಡಳಿತ ಮೊಕ್ತೇಸರ ಕೆ.ಯಂ.ಶಂಕರನಾರಾಯಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಿರಿಯರಾದ ಎಸ್.ಬಿ.ಖಂಡಿಗೆ, ಚಿದಾನಂದ ಆಳ್ವ ಮುಂಡಿತ್ತಡ್ಕ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಕೆ.ಯಂ. ಶ್ಯಾಮ ಭಟ್ ಸ್ವಾಗತಿಸಿ, ಕುಮಾರ ಕುಂಟಿಕಾನ ಮಠ ವಂದಿಸಿದರು. ಶ್ಯಾಮಪ್ರಸಾದ ಕುಳಮರ್ವ ನಿರೂಪಿಸಿದರು. ಕಾವ್ಯಶ್ರೀ ಕುಂಟಿಕಾನಮಠ ಪ್ರಾರ್ಥನೆ ಹಾಡಿದರು.
ಬ್ರಹ್ಮಕಲಶೋತ್ಸವ ಸಮಿತಿ ರಚನೆ
2024 ಏಪ್ರಿಲ್ 26ರಂದು ಶ್ರೀದೇವರಿಗೆ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಬ್ರಹ್ಮಕಲಶೋತ್ಸವ ಸಮಿತಿಯನ್ನು ರೂಪೀಕರಿಸಲಾಯಿತು.