ಹೊಸದಿಗಂತ ವರದಿ,ಕಲಬುರಗಿ:
ಬ್ಯಾಕ್ಟೀರಿಯಾ ಸೋಂಕಿನಿಂದ ಮೆದುಳಿನಲ್ಲಿ ಕಿವು ತುಂಬಿಕೊಂಡು ಅರೆ ಪ್ರಜ್ಞೆ ಸ್ಥಿತಿಯಲ್ಲಿದ 18 ತಿಂಗಳ ಮಗುವಿನ ಯಶಸ್ವಿ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಮಗುವಿನ ಪ್ರಾಣ ಉಳಿಸಿದ ಅದ್ಭುತ ಕಾರ್ಯ ಮಣೂರು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.
ಇಲ್ಲಿನ ಹುಮಾನಾಬಾದ್ ರಿಂಗ್ ರಸ್ತೆಯ ಗಣೇಶ ನಗರದಲ್ಲಿರುವ ಮಣ್ಣೂರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಆಸ್ಪತ್ರೆಯ ವೈದ್ಯರಾದ ಡಾ. ಫಾರೂಕ್ ಮಣ್ಣೂರ, ನ್ಯೂರೋ ಸರ್ಜನ್ ಡಾ. ಶಶಾಂಕ್ ಸಂಗೊಳ್ಳಿ ಈ ಕುರಿತು ಮಾಹಿತಿ ನೀಡಿದರು.
ಬಸವಕಲ್ಯಾಣ ತಾಲೂಕಿನ ನಾರಾಯಣ ಪೂರ್ ತಾಂಡಾ, ರಾಮು ಜಾಧವ್ ಅವರ 18 ತಿಂಗಳ ಮಗಳಾದ ರಿಯಾ ಜಾಧವ್ ಅವರನ್ನು ಮೇ. 19ರಂದು ಮಣೂರು ಆಸ್ಪತ್ರೆಗೆ ಸೇರಿಸಿದ್ದಾಗ ಮಗು ಅರೆ ಪ್ರಜ್ಞೆ ಸ್ಥಿತಿಯಲ್ಲಿ ಇತ್ತು. ಮಗುವಿಗೆ ಸ್ಕ್ಯಾನಿಂಗ್ ಮಾಡಿಸಿದಾಗ ಮೆದುಳಿನಲ್ಲಿ ಕಿವು ತುಂಬಿಕೊಂಡಿರುವುದು ಪತ್ತೆಯಾಯಿತು. ಈ ಸಂದರ್ಭದಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿತ್ತು.
ಆದರೂ ನಮ್ಮ ವೈದ್ಯರ ತಂಡದ ಸತತ ಆರು ಗಂಟೆಗಳ ಕಾಲ ನಿರಂತರ ಶಸ್ತ್ರ ಚಿಕಿತ್ಸೆ ಮೂಲಕ ಮಗುವನ್ನು ಗುಣಪಡಿಸಲಾಗಿದೆ ಎಂದು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ, ಡಾ. ಶಶಾಂಕ ಸಂಗೊಳ್ಳಿ ತಿಳಿಸಿದರು.