ಅರಣ್ಯಾಧಿಕಾರಿಗಳಿಂದ ಯಶಸ್ವಿ ಕಾರ್ಯಾಚರಣೆ: ಮನೆಯೊಳಗೆ ನುಸುಳಿದ್ದ ಚಿರತೆ ಸೆರೆ

ಹೊಸದಿಗಂತ ವರದಿ,ಉಡುಪಿ:

ಉಡುಪಿ ತಾಲೂಕಿನ ಹಿರಿಯಡ್ಕ ಪೇಟೆ ಸಮೀಪದ ಮನೆಯೊಳಗೆ ನುಸುಳಿದ್ದ ಚಿರತೆಯನ್ನು ಬುಧವಾರ ದಿನವಿಡೀ ಕಾರ್ಯಚರಣೆ ಸೆರೆ ಹಿಡಿಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಮೂರು ವರ್ಷದ ಪ್ರಾಯ ಗಂಡು ಚಿರತೆಯೂ ಐದಾರು ದಿನಗಳ ಹಿಂದೆ ಮನೆಯೊಳಗೆ ಸೇರಿಕೊಂಡಿರಬಹುದೆಂದು ಹೇಳಲಾಗಿದ್ದು, ಆಹಾರ ಇಲ್ಲದೇ ಕಂಗೆಟ್ಟಿದ್ದು, ಮೈ ತುಂಬಾ ಗಾಯಗಳಾಗಿದೆ. ಚಿರತೆಗೆ ಚಿಕಿತ್ಸೆಯನ್ನು ನೀಡಿ ಕಾಡಿಗೆ ಬಿಡಲು ಅರಣ್ಯಾಧಿಕಾರಿಗಳು ತೀರ್ಮಾನಿಸಿದ್ದಾರೆ.

ಮಂಗಳವಾರ ಬೆಳಗ್ಗೆ ಸ್ಥಳೀಯರು ಚಿರತೆ ಅವಿತಿರುವ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದರು. ಚಿರತೆ ಮನೆಯೊಳಗೆ ಸೇರಿದೆ ಎಂಬ ವಿಷಯ ತಿಳಿದು ಸ್ಥಳೀಯರೆಲ್ಲ ಬಂದು ಮನೆಯ ಸುತ್ತಮುತ್ತ ಸೇರಿದ್ದರು. ಚಿರತೆ ಸೆರೆ ಹಿಡಿಯಲು ಸಾರ್ವಜನಿಕರ ನೆರವಿನೊಂದಿಗೆ ಅರಣ್ಯ ಇಲಾಖೆಯವರು ಮುಂದಾದರು. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.

ಅರವಳಿಕೆ ತಜ್ಞರು ಸ್ಥಳಕ್ಕೆ ಬಂದು ಚಿರತೆಗೆ ಚುಚ್ಚುಮದ್ದು ಹಾಕಲು ನಡೆಸಿದ ಒಂದೆರಡು ಪ್ರಯತ್ನಗಳು ವಿಫಲವಾದವು. ಸಂಜೆಯ ವೇಳೆಗೆ ಕೊನೆಗೂ ಚಿರತೆಗೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸುವಲ್ಲಿ ಅರಣ್ಯ ಅಧಿಕಾರಿಗಳು ಯಶಸ್ವಿಯಾದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಹೆಲ್ಮೆಟ್ ಧರಿಸಿ ಮನೆಯೊಳಗೆ ತೆರಳಿ ಮತ್ತೊಮ್ಮೆ ಚುಚ್ಚುಮದ್ದು ಹಾಕಿ ಚಿರತೆಯನ್ನು ಸುರಕ್ಷಿತವಾಗಿ ಮನೆಯಿಂದ ರಕ್ಷಿಸಲಾಯಿತು.

ಮೊದಲೇ ಸಿದ್ಧಪಡಿಸಿದ್ದ ಬೋನಿನೊಳಗೆ ಚಿರತೆಯನ್ನು ಹಾಕಿ ಕೊಂಡೊಯ್ಯಲಾಗಿದೆ. ಅದೃಷ್ಟವಶಾತ್ ಈ ಮನೆಯಲ್ಲಿ ಯಾರು ವಾಸವಿಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!