ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಏಕಾಏಕಿ ನಂದಿನಿ ನದಿ ಉಕ್ಕಿ ಹರಿದು ಪಕ್ಷಿಕೆರೆ ತೀರದ ಪ್ರದೇಶಗಳಾದ ಕೆಮ್ರಾಲ್, ಪಂಜ, ಬೈಲಗುತ್ತು ಪಂಜ ಬಾಕಿ ಮಾರ್ ಪ್ರದೇಶದ 42 ಮನೆಗಳು, 4 ದೈವಸ್ಥಾನ, 5 ಬ್ರಹ್ಮ ಸ್ಥಾನ ಜಲಾವೃತಗೊಂಡು ಆತಂಕ ಸೃಷ್ಟಿಸಿತು.
ಭಾರಿ ಮಳೆಗೆ ಎಕರೆಗಟ್ಟಲೆ ಕೃಷಿ ಹಾನಿ ಸಂಭವಿಸಿದ್ದು12 ಕೃಷಿ ಪಂಪ್ ಶೆಡ್ ಕೂಡ ಮುಳುಗಡೆಯಾಗಿ ಸಂಕಷ್ಟ ಉಂಟಾಗಿದೆ.
ಉಲ್ಯ ಕುದುರು ಪ್ರದೇಶದಲ್ಲಿ 32 ಮನೆಗಳು ಜಲಾವೃತ ವಾಗಿದ್ದು ಸ್ಥಳೀಯರ ಸಹಕಾರದಿಂದ ದನ ಕರುಗಳನ್ನು ಹಾಗೂ 3 ಮನೆಯವರನ್ನು ಸ್ಥಳಾಂತರಗೊಳಿಸಲಾಗಿದೆ.
ಸಂಪರ್ಕ ರಸ್ತೆ ನೀರಿನಲ್ಲಿ ಮುಳುಗಿದ್ದು ಕೃಷಿ ನಾಶ ಸಂಭವಿಸಿದೆ ಎಂದು ಉಲ್ಯ ಸುಂದರ ಪೂಜಾರಿ ತಿಳಿಸಿದ್ದಾರೆ. ಇನ್ನು ಪಂಜ ಜಾರಂದಾಯ ದೈವಸ್ಥಾನ ಜಲಾವೃತಗೊಂಡಿದ್ದು, ನೆರೆ ನೀರಿನಲ್ಲಿ ಬಂದ ಹಾವು ಮತ್ತಿತರ ಜಲಚರ ಪ್ರಾಣಿಗಳು ದೇವಸ್ಥಾನದ ಒಳಗಡೆ ಸೇರಿಕೊಂಡಿವೆ ಎಂದು ಕೃಷಿಕ ಸತೀಶ್ ಶೆಟ್ಟಿ ಬೈಲಗುತ್ತು ತಿಳಿಸಿದ್ದಾರೆ.
ಭಾರೀ ಮಳೆಗೆ ಪಂಜದಿಂದ ಸುರತ್ಕಲ್ ನ ಮಧ್ಯ ಕಡೆಗೆ ಸಂಪರ್ಕ ರಸ್ತೆ ಸುಮಾರು ಒಂದು ಕಿಲೋಮೀಟರ್ ಮುಳುಗಡೆಯಾಗಿದೆ.