ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಅಖಾಡದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ಅವರ ಪತ್ನಿ ಸುನಿತಾ ಕೇಜ್ರಿವಾಲ್ (Sunitha Kejriwal) ಎಂಟ್ರಿಕೊಟ್ಟಿದ್ದು, ಚುನಾವಣಾ (Lok Sabha Election) ಪ್ರಚಾರ ಅಖಾಡಕ್ಕೆ ಇಳಿಸಲು ಆಪ್ (AAP) ನಿರ್ಧರಿಸಿದೆ.
ದೆಹಲಿ ಮದ್ಯ ಹಗರಣ (Delhi Liquor Scam) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈಗ ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಹಿನ್ನಲೆ ಕೇಜ್ರಿವಾಲ್ ಪತ್ನಿ ಸುನೀತಾ ಕೇಜ್ರಿವಾಲ್ ಅವರು ದೆಹಲಿಯಲ್ಲಿ ಆಪ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ .
ನಾಳೆಯಿಂದ ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಸುನೀತಾ ಕೇಜ್ರಿವಾಲ್ ಪ್ರಚಾರ ಆರಂಭಿಸುವ ಸಾಧ್ಯತೆ ಇದೆ. ಸುನೀತಾ ಕೇಜ್ರಿವಾಲ್ ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲು. ಇದಕ್ಕೂ ಮುನ್ನ ಅವರು ರಾಜಕೀಯವಾಗಿ ಗುರುತಿಸಿಕೊಂಡಿರಲಿಲ್ಲ.
ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಸುನೀತಾ ಕೇಜ್ರಿವಾಲ್ ಅವರು ವೀಡಿಯೊ ಸಂದೇಶಗಳು ಮತ್ತು ಪತ್ರಿಕಾಗೋಷ್ಠಿಗಳ ಮೂಲಕ ಮುನ್ನಲೆಗೆ ಬಂದಿದ್ದಾರೆ. ಕೇಜ್ರಿವಾಲ್ ಬಂಧನ ಖಂಡಿಸಿ ದೆಹಲಿಯಲ್ಲಿ ವಿಪಕ್ಷಗಳು ನಡೆಸಿದ ಸಮಾವೇಶದಲ್ಲಿ ಭಾಗಿಯಾಗಿ ಭಾಷಣ ಮಾಡಿದ್ದರು. ಇತ್ತಿಚೇಗೆ ಛತ್ತಿಸ್ಘಡದಲ್ಲಿ ನಡೆದ INDIA ಒಕ್ಕೂಟದ ಸಭೆಯಲ್ಲಿ ಅವರು ಪಕ್ಷವನ್ನು ಪ್ರತಿನಿಧಿಸಿದ್ದರು.