ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬೆಳವಣಿಗೆಗಳು ಚರ್ಚೆಗೆ ಕಾರಣವಾಗಿದ್ದು, ಟಿವಿಕೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಘೋಷಿಸಿದ ಬಳಿಕ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಭಿನ್ನಾಭಿಪ್ರಾಯ ಬಹಿರಂಗವಾಗಿ ಸದ್ದು ಮಾಡುತ್ತಿದೆ.
ದೀರ್ಘಕಾಲದ ರಾಜಕೀಯ ಸ್ನೇಹಕ್ಕೆ ಬಿರುಕು ಬಿದ್ದಂತೆ ಕಾಣುತ್ತಿರುವ ಈ ಬೆಳವಣಿಗೆ, ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.
ಡಿಎಂಕೆ ನಾಯಕರು ಕಾಂಗ್ರೆಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮೈತ್ರಿ ಧರ್ಮ ಪಾಲಿಸದೇ ಬೆನ್ನಿಗೆ ಚೂರಿ ಹಾಕಿದಂತಾಗಿದೆ ಎಂದು ಕಿಡಿಕಾರಿದ್ದಾರೆ. ಈ ಆರೋಪಕ್ಕೆ ಕಾಂಗ್ರೆಸ್ ವಲಯದಿಂದಲೂ ತಕ್ಷಣವೇ ತಿರುಗೇಟು ಬಂದಿದ್ದು, ಹಳೆಯ ರಾಜಕೀಯ ಘಟನೆಗಳನ್ನು ಉಲ್ಲೇಖಿಸಿ ಡಿಎಂಕೆಯನ್ನೇ ಪ್ರಶ್ನಿಸಲಾಗಿದೆ.
ಇದನ್ನೂ ಓದಿ:
ಕಾಂಗ್ರೆಸ್ ನಾಯಕ ಶ್ರೀವತ್ಸ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಲವು ವರ್ಷಗಳ ರಾಜಕೀಯ ಇತಿಹಾಸವನ್ನು ಉಲ್ಲೇಖಿಸಿರುವ ಅವರು, ಬೇರೆ ಬೇರೆ ಸಂದರ್ಭಗಳಲ್ಲಿ ಡಿಎಂಕೆ ತನ್ನ ರಾಜಕೀಯ ಲಾಭಕ್ಕಾಗಿ ಹಲವು ಮೈತ್ರಿ ಬದಲಾವಣೆಗಳನ್ನು ಮಾಡಿಕೊಂಡಿದೆ ಎಂದು ಆರೋಪಿಸಿದ್ದಾರೆ.
ತಮಿಳುನಾಡಿನ ಜನಾದೇಶಕ್ಕೆ ಗೌರವ ಸೂಚಿಸುವ ನಿಟ್ಟಿನಲ್ಲಿ ತೆಗೆದುಕೊಂಡ ನಿರ್ಧಾರವಿದು ಎಂದು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದ್ದರೆ, ಡಿಎಂಕೆ ಇದನ್ನು ರಾಜಕೀಯ ದ್ರೋಹ ಎಂದು ಬಣ್ಣಿಸಿದೆ. ಈ ವಾಕ್ಸಮರ ಮುಂದಿನ ದಿನಗಳಲ್ಲಿ ರಾಜ್ಯದ ರಾಜಕೀಯ ಸಮೀಕರಣಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.



