ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ತಿಂಗಳಿನಿಂದ ನಡೆಯುತ್ತಿರುವ ಶಿವಸೇನೆಯ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನಡುವಿನ ಬಣದ ಕಾನೂನು ಸಮರದಲ್ಲಿ ಇದೀಗ ಉದ್ಧವ್ ಠಾಕ್ರೆಗೆ ಹಿನ್ನಡೆಯಾಗಿದ್ದು ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆ ನೀಡುವ ಕುರಿತು ಉದ್ಧವ್ ಠಾಕ್ರೆ ವಾದವನ್ನು ಸುಪ್ರಿಂ ಕೋರ್ಟ್ ತಿರಸ್ಕರಿಸಿದ್ದು ಚುನಾವಣಾ ಆಯೋಗದ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದೆ.
ಇದರಿಂದಾಗಿ ಇಲ್ಲಿಯವರೆಗೆ ಶಿವಸೇನಾ ಚುನಾವಣೆ ಚಿಹ್ನೆ ಇತ್ಯಾದಿಗಳ ಕುರಿತಾಗಿ ಪ್ರಕ್ರಿಯೆಯನ್ನು ನಿಲ್ಲಿಸಿದ್ದ ಚುನಾವಣಾ ಆಯೋಗಕ್ಕೆ ಉನ್ನತ ನ್ಯಾಯಾಲಯದ ಈ ಆದೇಶ ಮುಂದುವರಿಯುವ ಸೂಚನೆ ಕೊಟ್ಟಂತಾಗಿದೆ. ಹಾಗಾಗಿ ನಿಜವಾದ ಶಿವಸೇನೆ ಯಾವುದು ಎಂದು ಚುನಾವಣಾ ಆಯೋಗ ಗುರುತಿಸಲಿದೆ.
ಕೆಲ ವರದಿಗಳ ಪ್ರಕಾರ ಎರಡು ಬಣಗಳಲ್ಲಿ ನಿಜವಾದ ಶಿವಸೇನೆಯನ್ನು ಗುರುತಿಸುವ ಚುನಾವಣಾ ಆಯೋಗದ ಪರಿಶೀಲನಾ ಪ್ರಕ್ರಿಯೆಯು ಹಲವು ತಿಂಗಳುಗಳ ಕಾಲ ತೆಗೆದುಕೊಳ್ಳಬಹುದು ಎನ್ನಲಾಗಿದೆ.
ಕಾನೂನು ತಜ್ಞರ ಪ್ರಕಾರ, ಪರಿಗಣನೆಯಾಗಬಹುದಾದ ಅಂಶಗಳಲ್ಲಿ ಸಾಂಸ್ಥಿಕ ಭಾಗದಲ್ಲಿ ಮತ್ತು ಶಾಸಕಾಂಗ ವಿಭಾಗದಲ್ಲಿ ಯಾರು ಹೆಚ್ಚಿನ ಬೆಂಬಲಿಗರನ್ನು ಹೊಂದಿದ್ದಾರೆ ಎಂಬುದರ ಕುರಿತೂ ಪರಿಶೀಲಿಸಲಾಗುತ್ತದೆ. ಸಂಘಟನೆ ಮತ್ತು ಶಾಸಕಾಂಗ ವಿಭಾಗದಲ್ಲಿನ ಬಲದ ಹೊರತಾಗಿ, ರಾಜಕೀಯ ಚಟುವಟಿಕೆಗಳನ್ನು ಸಹ ಪರಿಗಣಿಸಬಹುದು ಎನ್ನಲಾಗಿದೆ.
“ನಿಜವಾದ ಶಿವಸೇನೆ” ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡುತ್ತದೆ ಎಂದು ಇಲ್ಲಿಯವರೆಗೆ ಕಾಯುತ್ತಿದ್ದ ಕೇಂದ್ರ ಚುನಾವಣಾ ಕಾವಲುಗಾರನಾಗಿರುವ ಚುನಾವಣಾ ಆಯೋಗಕ್ಕೆ ಈಗ ಸುಪ್ರೀಂ ಕೋರ್ಟ್ನಿಂದ ಅಧಿಕೃತವಾಗಿ ಮುಂದುವರೆಯುವ ಸೂಚನೆ ಸಿಕ್ಕಂತಾಗಿದೆ. ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಎಂಆರ್ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಸಂವಿಧಾನ ಪೀಠವು ಇಸಿ ಪ್ರಕ್ರಿಯೆಗೆ ತಡೆ ನೀಡಲು ನಿರಾಕರಿಸಿದ್ದು ಶಿವಸೇನಾ ಶಾಸಕರ ಅನರ್ಹತೆಯ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ ಕಾಯಬೇಕು ಎಂಬ ಉದ್ಧವ್ ಠಾಕ್ರೆ ಅವರ ವಾದವನ್ನು ತಿರಸ್ಕರಿಸಿದೆ.