ಕಚ್ಚಿದ್ರೆ ನಿಮ್ಮನ್ನೆ ಹೊಣೆ ಮಾಡ್ತೇವೆ: ಬೀದಿನಾಯಿ ‘ಅನ್ನದಾತ’ರಿಗೆ ಸುಪ್ರೀಂ ಚಾಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೀದಿನಾಯಿಗಳು ಯಾರಿಗಾದರೂ ಕಚ್ಚಿದರೆ ಅದಕ್ಕೆ ಆಹಾರ ನೀಡುವವರೇ ಹೊಣೆಗಾರರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೇರಳದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ನಾಯಿಗಳ ದಾಳಿ ಕುರಿತ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕಳೆದ ನಾಲ್ಕು ತಿಂಗಳಲ್ಲಿ ಕೇರಳದಲ್ಲಿ ಬೀದಿನಾಯಿ ದಾಳಿಯಿಂದಾಗಿ ಏಳು ಮಂದಿ ಸಾವನ್ನಪ್ಪಿದ್ದು, ಹತ್ತಾರು ಮಂದಿ ಗಾಯಗೊಂಡಿದ್ದಾರೆ.

ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರನ್ನೊಳಗೊಂಡ ಸುಪ್ರೀಂ ಪೀಠವು ”ಬೀದಿ ನಾಯಿಗಳು ಯಾರಿಗಾದರೂ ಕಚ್ಚಿದರೆ ಅದಕ್ಕೆ ಆಹಾರ ನೀಡುವವರೇ ಜವಾಬ್ದಾರಿ. ಸಂತ್ರಸ್ತರಿಗೆ ಉಂಟಾದ ಹಾನಿಗಳಿಗೂ ಸಹ ಅವರೇ ಜವಾಬ್ದಾರರಾಗಿರುತ್ತಾರೆ. ನಾಯಿಗಳಿಗೆ ಲಸಿಕೆ ಹಾಕುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ಬೀದಿನಾಯಿಗಳ ಆರೈಕೆ ಮಾಡುವವರು ವಿಶೇಷವಾಗಿ ಗುರುತು ಅಥವಾ ಸಂಖ್ಯೆ ನೀಡಬೇಕು” ಎಂದು ನ್ಯಾಯಾಲಯ ಸೂಚಿಸಿದೆ.

ಬೀದಿ ನಾಯಿಗಳ ರಕ್ಷಣೆಗೆ ವಿಶೇಷ ಕಾನೂನು ತರುವಂತೆ ಕೇರಳ ಸರ್ಕಾರಕ್ಕೆ ಸಲಹೆ ನೀಡಿದೆ. ಬೀದಿ ನಾಯಿಗಳನ್ನು ನೋಡಿಕೊಳ್ಳುವುದು ತುಂಬಾ ಮುಖ್ಯ ಇವುಗಳಿಂದ ಅಮಾಯಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಅಗತ್ಯ ಎಂದು ಕೋರ್ಟ್‌ ಹೇಳಿದೆ. ಬೀದಿನಾಯಿಗಳ ರಕ್ಷಣೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುವುದಾಗಿ ಮತ್ತು ಪುರಸಭೆ ಮತ್ತು ಪಂಚಾಯಿತಿ ವ್ಯಾಪ್ತಿಯಲ್ಲಿರುವ ನಾಯಿಗಳಿಗೆ ಆಹಾರ ಸಿಗುವಂತೆ ನೋಡಿಕೊಳ್ಳುವುದಾಗಿ ಕೇರಳ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!