ಹೊಸದಿಗಂತ ಡಿಜಿಟಲ್ ಡೆಸ್ಕ್:
ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಮೂಲಕ ಇವಿಎಂ ಬಳಸಿ ಚಲಾವಣೆಯಾದ ಮತಗಳ ಅಡ್ಡ ಪರಿಶೀಲನೆಗೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಪ್ರತಿಪಕ್ಷಗಳು ದೇಶದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಬಿಹಾರದ ಅರಾರಿಯಾದಲ್ಲಿ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪ್ರಧಾನಿ ಮೋದಿ , ಇಂದು ನಮ್ಮ ಪ್ರಜಾಪ್ರಭುತ್ವಕ್ಕೆ ಮಂಗಳಕರ ದಿನವಾಗಿದೆ. ಇವಿಎಂ ವಿಚಾರದಲ್ಲಿ ಅಳುತ್ತಿದ್ದ ಪ್ರತಿಪಕ್ಷಗಳ ಮುಖಕ್ಕೆ ಸುಪ್ರೀಂ ಕೋರ್ಟ್ ಕಪಾಳಮೋಕ್ಷ ಮಾಡಿದೆ ಎಂದು ಹೇಳಿದರು. ಅವರು ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಜಗತ್ತು ನಮ್ಮ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಹೊಗಳುತ್ತಿರುವಾಗ, ಪ್ರತಿಪಕ್ಷಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅದನ್ನು ದೂಷಿಸುತ್ತಿವೆಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ.
ಇಂದು ಮುಂಜಾನೆ, ಸುಪ್ರೀಂ ಕೋರ್ಟ್ ವಿವಿಪ್ಯಾಟ್ನೊಂದಿಗೆ ಇವಿಎಂಗಳನ್ನು ಬಳಸಿ ಚಲಾಯಿಸಿದ ಮತಗಳ ಸಂಪೂರ್ಣ ಕ್ರಾಸ್-ವೆರಿಫಿಕೇಶನ್ ಕೋರಿ ಸಲ್ಲಿಸಿದ ಮನವಿಗಳನ್ನು ತಿರಸ್ಕರಿಸಿತು ಮತ್ತು ವ್ಯವಸ್ಥೆಯ ಬಗ್ಗೆ ಕುರುಡು ಅಪನಂಬಿಕೆಯ ಯಾವುದೇ ಅಂಶವು ಅನಗತ್ಯ ಸಂದೇಹವನ್ನು ಉಂಟುಮಾಡಬಹುದು ಎಂದು ಹೇಳಿದೆ.
ಪ್ರಜಾಪ್ರಭುತ್ವವೆಂದರೆ ಎಲ್ಲಾ ಸಂಸ್ಥೆಗಳ ನಡುವೆ ಸಾಮರಸ್ಯ ಮತ್ತು ವಿಶ್ವಾಸವನ್ನು ನಿರ್ಮಿಸಲು ಶ್ರಮಿಸುವುದು ಎಂದು ಸಮರ್ಥಿಸಿಕೊಂಡ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠವು ಎರಡು ಏಕರೂಪದ ತೀರ್ಪುಗಳನ್ನು ನೀಡಿತು. ಜೊತೆಗೆ ಮತಪತ್ರಗಳಿಗೆ ಹಿಂತಿರುಗಲು ಬಯಸುವ ಅರ್ಜಿಗಳು ಸೇರಿದಂತೆ ಎಲ್ಲಾ ಮನವಿಗಳನ್ನು ವಜಾಗೊಳಿಸಿತು.