ಕ್ರಾಂತಿಕಾರಿಗಳ ಆಶ್ರಯದಾತೆ ಸುಶೀಲಾ ದೀದಿ; ಭಗತ್‌ ಸಿಂಗ್‌ಗೆ ರಕ್ಷಣೆ ನೀಡಿದ್ದ ಧೀರ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವಿಶೇಷ)
ಭಾರತದ ಅತ್ಯಂತ ಧೈರ್ಯಶಾಲಿ ಮಹಿಳಾ ಕ್ರಾಂತಿಕಾರಿ ಹಾಗೂ ರಾಷ್ಟ್ರೀಯವಾದಿಗಳಲ್ಲಿ ಒಬ್ಬರಾದ ಸುಶೀಲಾ ದೀದಿ ಅವರು ಅವರು 1905ರಲ್ಲಿ ಭಾರತದ ವಾಯುವ್ಯ ರಾಜ್ಯ ಗುಜರಾತ್‌ನಲ್ಲಿರುವ ಚಿಕ್ಕ ಹಳ್ಳಿಯಲ್ಲಿ ಜನಿಸಿದರು.
1926 ರ ಸಂದರ್ಭದಲ್ಲಿ ಸುಶೀಲಾದೀದಿ ಕಾಲೇಜು ದಿನಗಳಲ್ಲಿದ್ದಾಗ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳಿಗೆ ಬ್ರಿಟೀಷರು ಗಲ್ಲುಶಿಕ್ಷೆ ವಿಧಿಸಿದ್ದು ಅವರಲ್ಲಿನ ರಾಷ್ಟ್ರೀಯತೆಯ ಭಾವವನ್ನು ಉದ್ದೀಪನಗೊಳಿಸಲು ಕಾರಣವಾಯಿತು. ರೋಷನ್ ಸಿಂಗ್, ಬಿಸ್ಮಿಲ್ ಮತ್ತು ರಾಜೇಂದ್ರ ಲಾಹಿದಿ ಅವರಂತಹ ಅಪ್ರತಿಮ ಕ್ರಾಂತಿಕಾರಿಗಳು ಆ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಬ್ರಿಟೀಷರ ದರ್ಪ- ದೌರ್ಜನ್ಯಗಳಿಗೆ ಸಿಡಿದೆದ್ದ ಸುಶೀಲಾ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ ಸೇರ್ಪಡೆಯಾಗಿ ಕ್ರಾಂತಿಕಾರಿಗಳು ರಹಸ್ಯವಾಗಿ ತಪ್ಪಿಸಿಕೊಳ್ಳಲು ಸಹಾಯ ಮಾಡಲಾರಂಭಿಸಿದರು.
1928 ರಲ್ಲಿ ಬ್ರಿಟೀಷ್‌ ಅಧಿಕಾರಿ ಸೌಂಡರ್ಸ್ ಹತ್ಯೆಯ ಬಳಿಕ ಭಗತ್ ಸಿಂಗ್ ಮತ್ತು ಸಹ ಹೋರಾಟಗಾರರು ತಪ್ಪಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುವಲ್ಲಿ ಆಕೆ ಸಹಾಯ ಮಾಡಿದರು. ಮತ್ತು ಅವರು ಆಶ್ರಯ ಪಡೆಯಲು ಕಲ್ಕತ್ತಾದಲ್ಲಿ ಮನೆಯೊಂದನ್ನು ವ್ಯವಸ್ಥೆ ಮಾಡಿಕೊಟ್ಟರು.
1931 ರಲ್ಲಿ ಸ್ವಾತಂತ್ರ್ಯ ಚಳುವಳಿಗಳು ತೀವ್ರತೆ ಪಡೆದ ಸಂದರ್ಭದಲ್ಲಿ ಭಾರತೀಯರ ಮೇಲೆ ದರ್ಪ ತೋರುತ್ತಿದ್ದ ‌ಬ್ರಿಟೀಷ್ ಸಾರ್ಜೆಂಟ್ ಟೇಲರ್ ಮತ್ತು ಅವನ ಹೆಂಡತಿಯ ಮೇಲೆ ಸುಶೀಲಾ ದೀದಿ ಇತರೆ ಕ್ರಾಂತಿಕಾರಿಗಳೊಡಗೂಡಿ ಗುಂಡಿನ ದಾಳಿ ನಡೆಸಿದರು. ಆ ಬಳಿಕ ಬ್ರಟೀಷರಿಗೆ ಸಿಕ್ಕಿಬೀಳದೆ ಪಲಾಯನ ಮಾಡುವಲ್ಲಿ ಯಶಸ್ವಿಯಾದರು.
ನಂತರದ ವರ್ಷಗಳಲ್ಲಿ ಆಕೆ ಕ್ರಾಂತಿಕಾರಿಗಳಿಗೆ ಸಹಾಯ ಮಾಡುವುದಕ್ಕಾಗಿಯೇ ತನ್ನ ಸಂಪೂರ್ಣ ಬದುಕನ್ನು ಮುಡಿಪಿಟ್ಟರು. ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಮೋಹನ್ ಅವರನ್ನು ವಿವಾಹವಾದರು. ಸ್ವಾತಂತ್ರ್ಯದ ನಂತರ ಆಕೆ ದೆಹಲಿ ಕಾಂಗ್ರೆಸ್‌ನ ಅಧ್ಯಕ್ಷೆ ಹುದ್ದೆ ವಹಿಸಿಕೊಂಡರು. ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದರು. ಅದಕ್ಕಾಗಿ ಜನರಿಂದ ತನ್ನ ಹೆಸರಿನೊಂದಿಗೆ ದೀದಿ (ಸಹೋದರಿ) ಎಂಬ ಅಭಿದಾನವನ್ನು ಪಡೆದರು. ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರಾದ ಸುಶೀಲಾ ದೀದಿ 1963 ರಲ್ಲಿ ಜನವರಿ 15 ರಂದು ತಮ್ಮ 58 ನೇ ವಯಸ್ಸಿನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!