ಹೊಸದಿಗಂತ ಡಿಜಿಟಲ್ ಡೆಸ್ಕ್
ಐಸಿಸ್ ನಂಟು ಆರೋಪದಡಿ ಎನ್ ಐಎ ವಶಕ್ಕೆ ಪಡೆದಿದ್ದ ಮೂವರ ಪೈಕಿ ಇಬ್ಬರನ್ನು ಬಿಡುಗಡೆ ಮಾಡಿದೆ.
ಇಂದು ಎನ್ ಐಎ ತಂಡವು ಭಟ್ಕಳ , ತುಮಕೂರು ಹಾಗೂ ಬೆಳಗಾವಿಯಲ್ಲಿ ಕಾರ್ಯಾಚರಣೆ ನಡೆಸಿದ್ದು, ಈವೇಳೆ ಮೂವರು ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಸತತ ವಿಚಾರಣೆ ಬಳಿಕ ಇದೀಗ ತುಮಕೂರಿನ ಹೆಚ್ ಎಂಎಸ್ ಯುನಾನಿ ಮೆಡಿಕಲ್ ಕಾಲೇಜ್ ವಿದ್ಯಾರ್ಥಿ ಸಾಜಿದ್ ಹಾಗೂ ಭಟ್ಕಳದ ಮುಖ್ಯರಸ್ತೆ ನಿವಾಸಿ ಅಬ್ದುಲ್ ಮುಖ್ತದೀರ್ನನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಆದರೆ ಇವರ ಲ್ಯಾಪ್ಟ್ಯಾಪ್, ಮೊಬೈಲ್ ಸೇರಿದಂತೆ ಇತರ ಕೆಲ ವಸ್ತುಗಳನ್ನು ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ತಮ್ಮಲ್ಲಿ ಇರಿಸಿಕೊಂಡಿದ್ದಾರೆ.
ಐಸಿಸ್ ಉಗ್ರ ಸಂಘಟನೆಯ ಜೊತೆ ನಂಟು, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಹಲವು ಅನುಮಾನಸ್ಪದ ಚಟುವಟಿಕೆ ಕಾರಣದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ 6 ರಾಜ್ಯಗಳ 13 ಕಡೆ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಕರ್ನಾಟಕ ಮೂರು ಕಡೆ ಮೂವರನ್ನು ವಶಕ್ಕೆ ಪಡೆದಿತ್ತು.
ಮಹಾರಾಷ್ಟ್ರ ಮೂಲದ ತುಮಕೂರಿನ ಹೆಚ್ ಎಂಎಸ್ ಯುನಾನಿ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸಾಜಿದ್ ಅನ್ನು ತುಮಕೂರಿನ ಸದಾಶಿವನಗರದ 7 ಮುಖ್ಯ ರಸ್ತೆಯಲ್ಲಿ ವಾಸವಿದ್ದ ತನಿಖಾ ಸಂಸ್ಥೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸಾಜೀದ್ ಜೊತೆ ಮೊಬೈಲ್ , ಲ್ಯಾಪ್ಟಾಪ್ ವಶಕ್ಕೆ ಪಡೆಯಲಾಗಿತ್ತು.
ಭಟ್ಕಳದಲ್ಲಿ ತನಿಖಾ ಅಧಿಕಾರಿಗಳು ವಶಕ್ಕೆ ಪಡೆದ ಶಂಕಿತ ಆರೋಪಿ ಭಟ್ಕಳ ಮುಖ್ಯರಸ್ತೆ ನಿವಾಸಿ ಅಬ್ದುಲ್ ಮುಖ್ತದೀರ್ (30)ನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಹೆಚ್ಚಿನ ವಿಚಾರಣೆಗೆ ದೆಹಲಿಗೆ ಬರುವಂತೆ ನೋಟಿಸ್ ನೀಡಿದೆ. ಆರೋಪಿಯ ಬಳಿಯಿಂದ ಹೆಚ್ಚಿನ ಮಾಹಿತಿ ಸಂಗ್ರಹ ಸಾಧ್ಯವಾಗದ ಕಾರಣ ಅಧಿಕಾರಿಗಳು ಶಂಕಿತ ಆರೋಪಿಯನ್ನು ಬಿಡುಗಡೆ ಮಾಡಿದ್ದಾರೆ.
ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಲು ಅಬ್ದುಲ್ ಮುಖ್ತದೀರ್ ಪತ್ನಿ ಮನೆ ಮೇಲೆ ದಾಳಿ ನಡೆಸಿ ಅಬ್ದುಲ್ ವಶಕ್ಕೆ ಪಡೆದಿದ್ದರು. ಬಳಿಕ ಗೌಪ್ಯ ಸ್ಥಳದಲ್ಲಿ ಶಂಕಿತ ಆರೋಪಿಯನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಆರೋಪಿ ಸಹೋದರನನ್ನು ವಿಚಾರಣೆಗೆ ಒಳಪಡಿಸಿದ್ದರು.