ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ನೇಹಿತರ ಜೊತೆಯಲ್ಲಿ ಈಜಲು ಬಂದ ಐವರ ಪೈಕಿ ವ್ಯಕ್ತಿಯೋರ್ವ ನೇತ್ರಾವತಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದ ದೇವಸ್ಥಾನವೊಂದರ ಸಮೀಪ ಸೋಮವಾರ ಸಂಜೆ ನಡೆದಿದೆ.
ಬೆಳ್ತಂಗಡಿ ನಿವಾಸಿ ಲೋಹಿತಾಕ್ಷ ಮೃತಪಟ್ಟವರೆಂದು ಗುರುತಿಸಲಾಗಿದೆ. ಬೆಳ್ತಂಗಡಿ ನಿವಾಸಿಗಳಾದ ವಿನ್ಸಿ,ಮ್ಯಾಕ್ಸಿ,ಪ್ರಮೋದ್, ದಯಾನಂದ ಎಂಬವರ ಜೊತೆಗೆ ನೇತ್ರಾವತಿ ನದಿಗೆ ಈಜಾಡಲು ಬಂದಿದ್ಧ ವೇಳೆ ಘಟನೆ ನಡೆದಿದೆ.
ವಿನ್ಸಿ ಎಂಬವರ ಪತ್ನಿಯ ಮನೆ ಶಂಭೂರಿನಲ್ಲಿದ್ದು, ಇಲ್ಲಿಗೆ ಆಗಾಗ ಬಂದವರು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಿ ಹೋಗುತ್ತಿದ್ದರೆನ್ನಲಾಗಿದೆ. ಹಾಗೆ ಸೋಮವಾರ ಕೂಡ ಸ್ನೇಹಿತರೊಂದಿಗೆ ಬೆಳ್ತಂಗಡಿಯಿಂದ ಬಂದವರು, ನದಿಗೆ ಸ್ನಾನಕ್ಕಾಗಿ ನದಿಗೆ ತೆರಳಿದ್ದರು.
ನದಿಯಿಂದ ಲೋಹಿತಾಕ್ಷ ಅವರು ಕಾರಿನ ಬಳಿಗೆ ಹೋಗುವುದಾಗಿ ಬಂದಿದ್ದರು. ಸ್ನೇಹಿತರು ಸ್ನಾನ ಮುಗಿಸಿ ಕಾರಿನತ್ತ ಬಂದಾಗ ಇವರು ಕಾರಿನ ಬಳಿ ಇಲ್ಲದಿರುವುದನ್ನು ಕಂಡು ಗಾಬರಿಯಿಂದ ವಾಪಾಸ್ ನದಿಯತ್ತ ತೆರಳಿದಾಗ ನದಿ ಬದಿ ನೀರಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.ಈ ವೇಳೆ ತಲೆಯ ಭಾಗಕ್ಕೆ ಗಾಯವಾಗಿದ್ದು, ತಕ್ಷಣ ಅಲ್ಲಿಂದ ಮೇಲೆ ತರಲಾಗಿದೆಯಾದರೂ ಅ ವೇಳೆ ಆತ ಮೃತಪಟ್ಟ ಬಗ್ಗೆ ಸ್ನೇಹಿತರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗ್ರಾಮಾಂತರ ಇನ್ಸ್ ಪೆಕ್ಟರ್ ಶಿವಕುಮಾರ್ , ಎಸ್ ಐ ಹರೀಶ್ ಅಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ನರಿಕೊಂಬು ಗ್ರಾ.ಪಂ..ಅಧ್ಯಕ್ಷ ಸಂತೋಷ್ ಅವರು ಭೇಟಿ ನೀಡಿದ್ದಾರೆ ಹಾಗೂ ಗ್ರಾಮಸ್ಥರು ಜಮಾಯಿಸಿದ್ದರು.