ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಗಲಕೋಟೆಯಲ್ಲಿ ಪರ್ಸ್ನಲ್ಲಿರುವ ಹಣ ಕದ್ದಿದ್ದಾಳೆ ಎಂದು ಆರೋಪಿಸಿ ಬಾಲಕಿಯನ್ನು ಅವಮಾನಿಸಲಾಗಿದೆ. ಅವಮಾನದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕಂದಾಪುರ ಗ್ರಾಮದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 13 ವರ್ಷದ ಬಾಲಕಿ ದಿವ್ಯಾ ಬಾರಕೇರ ಮೃತರು.
ಪರ್ಸ್ನಲ್ಲಿದ್ದ ಎರಡು ಸಾವಿರ ರೂಪಾಯಿಯನ್ನು ಕದ್ದಿದ್ದಾಳೆ ಎಂದು ಶಾಲೆಯ ಶಿಕ್ಷಕಿಯೊಬ್ಬರು ಬಾಲಕಿಯನ್ನು ವಿವಸ್ತ್ರಗೊಳಿಸಿದ್ದರು. ಇದರಿಂದ ಬಾಲಕಿಗೆ ತೀವ್ರ ಅವಮಾನವಾಗಿತ್ತು.
ಶಿಕ್ಷಕಿ ಪರ್ಸ್ನ ಎರಡು ಸಾವಿರ ರೂಪಾಯಿ ಮಿಸ್ ಆದ ನಂತರ ನಾಲ್ವರು ವಿದ್ಯಾರ್ಥಿಗಳ ಮೇಲೆ ಅನುಮಾನವ್ಯಕ್ತಪಡಿಸಿದ್ದರು. ಅದರಲ್ಲಿ ದಿವ್ಯಾ ಕೂಡ ಒಬ್ಬಳಾಗಿದ್ದಳು. ದಿವ್ಯಾ ಸಾವಿನ ನಂತರ ಪೋಷಕರು ಪೊಲೀಸರಿಗೆ ವಿಷಯ ತಿಳಿಸದೆ ಅಂತಿಮ ವಿಧಿ ವಿಧಾನಗಳನ್ನು ಮುಗಿಸಿದ್ದಾರೆ. ಮರುದಿನ ಪೊಲೀಸರಿಗೆ ದೂರು ನೀಡಿದ್ದಾರೆ. ಮುಖ್ಯೋಪಾಧ್ಯಾಯರು ಹಾಗೂ ಅವಮಾನ ಮಾಡಿದ ಶಿಕ್ಷಕಿ ವಿರುದ್ಧ ದೂರು ದಾಖಲಾಗಿದೆ.