ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ನಲ್ಲಿ ಇಂದು ಬಾಂಗ್ಲಾ ತಂಡವನ್ನು ಭಾರತ ಎರದುರಿಸಲಿದ್ದು ಹೈವೋಲ್ಟೇಜ್ ಪಂದ್ಯಕ್ಕೆ ಅಡಿಲೇಡ್ ಮೈದಾನ ಸಜ್ಜಾಗಿದೆ. ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದ್ದು ಭಾರತವು ಪಂದ್ಯವನ್ನು ಸೋತರೆ ಸೆಮಿಸ್ ಹಾದಿ ಕಠಿಣಗೊಳ್ಳಲಿದೆ. ನೆಚ್ಚಿನ ಭಾರತ ತಂಡವೇ ಗೆಲ್ಲುತ್ತದೆ ಎಂಬ ನಿರೀಕ್ಷೆಯಿಟ್ಟು ಕೊಳ್ಳುವುದು ಸಹಜವಾಗಿದ್ದರೂ ಬಾಂಗ್ಲಾ ತಂಡವನ್ನು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.
ಟೀಂ ಇಂಡಿಯಾವು ಕೆಲ ಸ್ಟಾರ್ ಆಟಗಾರರ ಇಂಜುರಿ ಹಾಗೂ ಸಪ್ಪೆ ಪ್ರದರ್ಶನದಿಂದಾಗಿ ಸಮಸ್ಯೆ ಎದುರಿಸುತ್ತಿದ್ದು ಪ್ಲೇಯಿಂಗ್ XI ಕುರಿತು ಚಿಂತೆ ಎದುರಾಗಿದೆ. ಓಪ್ನರ್ ಬ್ಯಾಟ್ಸ್ ಮನ್ ಕೆ.ಎಲ್. ರಾಹುಲ್ ಮಿಂಚಿನ ಆಟ ಆಡುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ಅವರನ್ನು ಪಂದ್ಯದಿಂದ ಕೈ ಬಿಡಬೇಕು ಎಂಬೆಲ್ಲ ಕೂಗಿನ ಮಧ್ಯೆಯೇ ಕೋಚ್ ದ್ರಾವಿಡ್ ಅವರು ಈ ಪಂದ್ಯದಲ್ಲಿ ಮುಂದುವರೆಯುತ್ತಾರೆ ಎಂದಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ ಆಡಲಿದ್ದು ನಂತರದ ಸ್ಥಾನವನ್ನು ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ.
ಇತ್ತೀಚೆಗೆ ಉತ್ತಮ ಫಿನಿಶರ್ ಎಂದು ಗುರುತಿಸಿಕೊಂಡಿರುವ ದಿನೇಶ್ ಕಾರ್ತಿಕ್ ಇಂಜುರಿಯಿಂದ ಹೊರಗುಳಿಯುವ ಸಂಭವ ಇದ್ದು ಅವರ ಬದಲಿಯಾಗಿ ರಿಷಬ್ ಪಂತ್ ಅವರ ಸ್ಥಾನವನ್ನು ತುಂಬಲಿದ್ದಾರೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಅಂತೆಯೆ ಕಳೆದ ಪಂದ್ಯದಲ್ಲಿ ಅಕ್ಷರ್ ಪಟೇಲ್ ಬದಲು ಸ್ಥಾನ ಪಡೆದಿದ್ದ ದೀಪಕ್ ಹೂಡ ಯಾವುದೇ ಕಮಾಲ್ ಮಾಡಲಿಲ್ಲ. ಹೀಗಾಗಿ ಅಕ್ಷರ್ ಪ್ಲೇಯಿಂಗ್ ಇಲೆವೆನ್ಗೆ ಮರಳುವ ಸಾಧ್ಯತೆ ಹೆಚ್ಚಿದೆ.
ಇನ್ನು ಸ್ಪಿನ್ನರ್ ಅಶ್ವಿನ್ ಕಮಾಲ್ ಕೂಡ ಕಳಪೆಯಾಗಿದ್ದು ಅವರ ಸ್ಥಾನದಲ್ಲಿ ಯಜ್ವೇಂದ್ರ ಚಹಲ್ ಬರುತ್ತಾರೆ ಎನ್ನಲಾಗುತ್ತಿದೆ. ವೇಗಿಗಳಾಗಿ ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಹಾಗೂ ಅರ್ಶ್ದೀಪ್ ಸಿಂಗ್ ಇರಲಿದ್ದಾರೆ.
ಬಾಂಗ್ಲಾ ತಂಡವೂ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು ಬಹುತೇಕ ಎಲ್ಲ ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕೆ ಬಾಂಗ್ಲಾ ಕಠಿಣ ಪೈಪೋಟಿ ನೀಡಿದೆ. ಬಾಂಗ್ಲಾ ತಂಡ ತನ್ನ ಬೌಲರ್ಗಳ ಮೇಲೆ ಹೆಚ್ಚು ಅವಲಂಬಿತಗೊಂಡಿದೆ.
ಹೀಗಿರಲಿದೆ ಪ್ಲೇಯಿಂಗ್ XI
ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ರಿಷಭ್ ಪಂತ್(ವಿಕೆಟ್ ಕೀಪರ್), ಹರ್ಷಲ್ ಪಟೇಲ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್.
ಬಾಂಗ್ಲಾ: ಶಕಿಬ್ ಅಲ್ ಹಸನ್ (ನಾಯಕ), ನಜ್ಮುಲ್ ಹೊಸೈನ್ ಶಾಂಟೊ, ಸೌಮ್ಯ ಸರ್ಕಾರ್, ಲಿಟ್ಟನ್ ದಾಸ್, ಅಫೀಫ್ ಹೊಸೈನ್, ಮೆಹಿದಿ ಹಸನ್ ಮಿರಾಜ್, ನೂರುಲ್ ಹಸನ್ (ವಿಕೆಟ್ ಕೀಪರ್), ಹಸನ್ ಮಹ್ಮದ್, ಎಬಾಡೋತ್ ಇಸ್ಲಾಮ್, ಮೊಸದ್ದೆಕ್ ಹೊಸೈನ್, ತಸ್ಕಿನ್ ಅಹ್ಮದ್, ಯಾಸಿರ್ ಅಲಿ, ಇಬಾಡೋತ್ ಇಸ್ಲಾಮಿನ್, ಮುಸ್ತಫಿಜುರ್ ರೆಹಮಾನ್.
ವರುಣನ ಅವಕೃಪೆ?
ಬುಧವಾರ ಸಂಜೆ ಅಡಿಲೇಡ್ನಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗಿದ್ದು ಈ ಪಂದ್ಯಕ್ಕೆ ವರುಣನ ಕಾಡ ಎದುರಾಗುವ ಆತಂಕ ಮೂಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ಒಂದು ಅಂಕ ಪಡೆದು 2ನೇ ಸ್ಥಾನದಲ್ಲೇ ಉಳಿಯಲಿದೆ. ಆಗ ಜಿಂಬಾಬ್ವೆ ವಿರುದ್ಧದ ಪಂದ್ಯ ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಲಿದೆ.
ವರದಿಯ ಪ್ರಕಾರ, ಬುಧವಾರ ಸಂಜೆ ಶೇಕಡ 60 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಕಾಲಮಾನಾದ ಪ್ರಕಾರ ಪಂದ್ಯ ಸಂಜೆ 6:30ಕ್ಕೆ ಆರಂಭವಾಗುವುದರಿಂದ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಗಳು ಹೆಚ್ಚಿವೆ. ಆದರೆ ಇತ್ತೀಚಿನ ಮಾಹಿತಿ ಪ್ರಕಾರ ಬುಧವಾರ ಮಧ್ಯಾಹ್ನದ ವರೆಗೂ ಯಾವುದೇ ಮಳೆಯಾಗಿಲ್ಲ ಹಾಗಾಗಿ ಮಳೆ ಸಂಭವ ಕಡಿಮೆಯಾಗಬಹುದು ಎನ್ನಲಾಗಿದೆ.